'ಒಂದು ದೇಶ, ಒಂದು ಪಡಿತರ ಚೀಟಿ': ಇದು ಮೋದಿ ತೆರೆದಿಟ್ಟ ಬುತ್ತಿ!
ಮೋದಿ ಸರ್ಕಾರದಿಂದ ಮತ್ತೊಂದು ಕ್ರಾಂತಿಕಾರಿ ಯೋಜನೆ| 'ಒಂದು ದೇಶ, ಒಂದು ಪಡಿತರ ಚೀಟಿ' ಪರಿಕಲ್ಪನೆ| 2020ರ ಜೂನ್ 30ರೊಳಗೆ ಜಾರಿಗೆ ತರಲು ರಾಜ್ಯಗಳಿಗೆ ಸೂಚನೆ| ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಾಹಿತಿ| ದೇಶದ ಯಾವುದೇ ಭಾಗದಲ್ಲಿ ಪಡಿತರ ಪಡೆಯುವ ಅವಕಾಶ|
ನವದೆಹಲಿ(ಜೂ.29): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 'ಒಂದು ದೇಶ, ಒಂದು ಪಡಿತರ ಚೀಟಿ' ವ್ಯವಸ್ಥೆ ಜಾರಿಗೆ ಮುಂದಾಗಿದ್ದು, ಇದಕ್ಕಾಗಿ ರಾಜ್ಯಗಳಿಗೆ ಒಂದು ವರ್ಷದ ಗಡುವು ನೀಡಿದೆ.
ಒಂದು ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ನಾಗರಿಕರು ದೇಶದ ಯಾವುದೇ ರಾಜ್ಯದಲ್ಲಿ ಬೇಕಾದರೂ ಪಡಿತರ ಪಡೆಯುವ ‘ಒಂದು ದೇಶ ಒಂದೇ ಪಡಿತರ ಚೀಟಿ’ಯೋಜನೆ ಇದಾಗಿದೆ.
ಈ ಯೋಜನೆಯನ್ನು 2020ರ ಜೂನ್ 30ರೊಳಗೆ ಜಾರಿಗೆ ತರಬೇಕು ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಸೂಚಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಈ ಕ್ರಾಂತಿಕಾರಕ ಯೋಜನೆಯನ್ನು ಆದಷ್ಟು ಶೀಘ್ರದಲ್ಲಿ ಜಾರಿಗೆ ತರಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ ಎಂದು ಹೇಳಿದ್ದಾರೆ.
ಈ ವ್ಯವಸ್ಥೆಯಡಿ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ದೇಶದ ಯಾವುದೇ ಭಾಗದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಬ್ಸಿಡಿದರದಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಬಹುದಾಗಿದೆ.