ನಾಳೆ ಸುಪ್ರೀಂಕೋರ್ಟ್’ನಿಂದ ಕಾವೇರಿ ತೀರ್ಪು ಹೊರ ಬೀಳುವ ಸಾಧ್ಯತೆ?
ಬಹುಕಾಲದಿಂದ ಸುಪ್ರೀಂಕೋರ್ಟ್’ನಲ್ಲಿ ವಿಚಾರಣೆಗೊಳಪಡುತ್ತಿರುವ ಕಾವೇರಿ ನದಿ ನೀರು ಹಂಚಿಕೆ ತೀರ್ಪನ್ನು ಸುಪ್ರೀಂ ಕೋರ್ಟ್ ನಾಳೆ ನೀಡುವ ಸಾಧ್ಯತೆಯಿದೆ.
ಬೆಂಗಳೂರು (ಫೆ.15): ಬಹುಕಾಲದಿಂದ ಸುಪ್ರೀಂಕೋರ್ಟ್’ನಲ್ಲಿ ವಿಚಾರಣೆಗೊಳಪಡುತ್ತಿರುವ ಕಾವೇರಿ ನದಿ ನೀರು ಹಂಚಿಕೆ ತೀರ್ಪನ್ನು ಸುಪ್ರೀಂ ಕೋರ್ಟ್ ನಾಳೆ ನೀಡುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಮುನ್ನಚ್ಚರಿಕಾ ಕ್ರಮವಾಗಿ ಮಂಡ್ಯ ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಮಾಡಲಾಗಿದೆ. ಆದರೆ ಈ ವರದಿಯನ್ನು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ನನಗೆ ಬಂದ ಮಾಹಿತಿ ಪ್ರಕಾರ ನಾಳೆ ಸುಪ್ರೀಂಕೋರ್ಟ್’ನಲ್ಲಿ ತೀರ್ಪು ಹೊರ ಬರುವುದಿಲ್ಲ. ಫೆ.23 ರಂದು ಹೊರ ಬೀಳುವ ಸಾಧ್ಯತೆ ಇದೆ ಎಂದಿದ್ದಾರೆ.
ಕರ್ನಾಟಕದ ವಾದವೇನು ?
ಕಾವೇರಿ ಜಲ ವಿವಾದ ನ್ಯಾಯಮಂಡಳಿ 2007 ರ ಫೆ. 5 ರಂದು ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ ಕೇರಳಕ್ಕೆ 30 ಟಿಎಂಸಿ, ಕರ್ನಾಟಕಕ್ಕೆ 270, ತಮಿಳುನಾಡಿಗೆ 419 ಮತ್ತು ಪುದುಚೆರಿಗೆ 7 ಟಿಎಂಸಿ ನೀರು ಹಂಚಿತ್ತು. ಇದರ ಪ್ರಕಾರ ಕರ್ನಾಟಕವು ತಮಿಳುನಾಡಿಗೆ ವರ್ಷಕ್ಕೆ 192 ಟಿಎಂಸಿ ನೀರು ಕೊಡಬೇಕು. ಇದರಲ್ಲಿ 156 ಟಿಎಂಸಿಯನ್ನು ಜೂನ್ನಿಂದ ಅಕ್ಟೋಬರ್ ಒಳಗೇ ಬಿಡಬೇಕು. ಆದರೆ, ಸಕಾಲದಲ್ಲಿ ಮಳೆ ಬೀಳದೆ ಕೆಲವೊಮ್ಮೆ ತಿಂಗಳ ಲೆಕ್ಕಾಚಾರದ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗದಿದ್ದಾಗ ಎರಡು ರಾಜ್ಯಗಳ ನಡುವೆ ಸಂಘರ್ಷ ಉಂಟಾಗುತ್ತದೆ. 2016ರಲ್ಲಿ ಭಾರಿ ಹಿಂಸಾಚಾರವೇ ನಡೆದಿತ್ತು. ಲಭ್ಯತೆ ಗಮನಿಸಿ ನೀರು ಬಿಡುಗಡೆಗೆ ಅನುಕೂಲವಾಗುವಂತೆ ತೀರ್ಪನ್ನು ಮರುಪರಿಶೀಲಿಸಬೇಕು ಎನ್ನುವುದು ಕರ್ನಾಟಕದ ವಾದ.