ಬೆಂಗಳೂರು(ಸೆ.13): ಕಾವೇರಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟಿನ ತೀರ್ಪು ರಾಜ್ಯಾದ್ಯಂತ ಪ್ರಕ್ಷುಬ್ಧ ವಾತಾವರಣಕ್ಕೆ ಮುನ್ನುಡಿ ಬರೆದಿದೆ. ಇಷ್ಟು ದಿನ ಶಾಂತಿಯುತವಾಗಿದ್ದ ಕನ್ನಡಿಗರ ಹೋರಾಟ ಹಿಂಸಾತ್ಮಕ ರೂಪಕ್ಕೆ ತಿರುಗಿದ್ದು, ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿಮಾಡುವ ಜೊತೆಗೆ 16 ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಹಾಗಾದ್ರೆ ಪರಿಸ್ಥಿತಿ ಇಷ್ಟು ಹದಗೆಡಲು ಪೊಲೀಸ್ರು ಎಡವಿದ್ದೆಲ್ಲಿ ಅನ್ನೋದರ ಉತ್ತರ ಹುಡುಕುವ ಪ್ರಯತ್ನ ಸುವರ್ಣ ನ್ಯೂಸ್​ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾವೇರಿ ವಿವಾದಕ್ಕೆ ಬೆಂಗಳೂರು ಧಗಧಗ: ಪರಿಸ್ಥಿತಿ ಹದಗೆಟ್ಟಾಗ ರಾಜಧಾನಿಯಲ್ಲಿ ಸೆಕ್ಷನ್​ 144

ತಮಿಳುನಾಡಿಗೆ ಇನ್ನಷ್ಟು ನೀರು ಬಿಡುವಂತೆ ಸುಪ್ರೀಂ ಕೋರ್ಟ್​ ನೀಡಿದ ತೀರ್ಪು ಕರ್ನಾಟಕ ಬೆಂಕಿ ಚೆಂಡು ಮಾಡಿದೆ. ಇಷ್ಟು ದಿನ ಶಾಂತವಾಗಿದ್ದ ಪ್ರತಿಭಟನೆಗಳು ದಿಢೀರ್ ಹಿಂಸಾರೂಪ ಪಡೆದಿವೆ. ಪರಿಸ್ಥಿತಿ ಹದಗೆಡಬಹುದು ಎನ್ನುವ ಅರಿವಿದ್ದರೂ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲು ವಿಳಂಬ ಮಾಡಿದ ಬೆಂಗಳೂರು ಪೊಲೀಸರು ಸರಿಯಾದ ಬೆಲೆ ತೆತ್ತಿದ್ದಾರೆ. ತೀರ್ಪು ಹೊರಬರುತ್ತಿದ್ದಂತೆ ಇಡೀ ಬೆಂಗಳೂರು ಅಘೋಷಿತ ಬಂದ್ ವಾತಾವರಣಕ್ಕೆ ಮೊಳಗಿತು. ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟು ಮುಚ್ಚಿ ಆಕ್ರೋಶ ವ್ಯಕ್ತೊಡಿಸಿದ್ರು. ಸರ್ಕಾರಿ ಬಸ್ ಸಂಚಾರವೂ ವಿಳಂಬವಾಯಿತು.

ಇನ್ನು ಪೊಲೀಸರು ಪ್ರತಿಭಟನೆಯ ಕಾವನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಹಲವೆಡೆ ತಮಿಳುನಾಡು ಮೂಲದ ವಾಹನಗಳ ಮೇಲೆ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವ ಕೃತ್ಯಗಳು ಆರಂಭವಾಗಿದ್ದವು. ಆಗಲೇ ನಿಷೇಧಾಜ್ಞೆ ಜಾರಿ ಮಾಡಿದ್ದಲ್ಲಿ ಪರಿಸ್ಥಿತಿಯನ್ನ ಹತೋಟಿಗೆ ತರುವ ಸಾಧ್ಯತೆಯಿತ್ತು. ಮಾಧ್ಯಮಗಳಲ್ಲಿ ಬೆಂಗಳೂರಿನಲ್ಲಿ ನಿಷೇದಾಜ್ಞೆ ಅನ್ನೋ ಮಾಹಿತಿ ಹಾಕಿದಾಗ, ಪೊಲೀಸ್​ ಇಲಾಖೆ ನಿಷೇಧಾಜ್ಞೆ ಜಾರಿ ಮಾಡಿಲ್ಲ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಮತ್ತಷ್ಟು ಪ್ರತಿಭಟನಾಕಾರರು ಜಮಾ ಆಗಲು ಅವಕಾಶ ಮಾಡಿಕೊಟ್ರು. ಪರಿಸ್ಥಿತಿ ಕೈ ಮೀರಿದಾಗ ಸರ್ಕಾರ ನಿಷೇಧಾಜ್ಞೆಗೆ ಸೂಚಿಸಿತು.

ಸುಮಾರು ಐವತ್ತಕ್ಕೂ ಹೆಚ್ಚು ತಮಿಳುನಾಡು ನೋಂದಣಿ ಸಂಖ್ಯೆ ಇರುವ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕೆಪಿಎನ್​ ಎನ್ನುವ ಟ್ರಾವೆಲ್ಸ್​ಗೆ ಸೇರಿದ ಮೂವತ್ತೈದು ಬಸ್​​ಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆಯನ್ನು ತಡೆಹಿಡಿಯಲು ಸಾಧ್ಯವೇ ಇಲ್ಲ ಎಂಬಷ್ಟು ಹಿಂಸಾತ್ಮಕವಾದ ನಂತರ ಪೊಲೀಸರು ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ಆದರೆ ಆ ಕೆಲಸವನ್ನು ಸ್ವ;ಲ್ಪ ಮುಂಚೆ ಮಾಡಿದ್ದೇ ಆದಲ್ಲಿ ಹಲವರ ಆಸ್ತಿಪಾಸ್ತಿಗಳನ್ನು ಕಾಪಾಡಬಹುದಿತ್ತು. ಆದ್ರೆ, ಅದ್ಯಾಕೋ ಪೊಲೀಸ್ ಇಲಾಖೆ ಮೊದಲು ಕೈ ಕಟ್ಟಿ ಕೂತುಬಿಟ್ಟಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನ ಭದ್ರತೆಗೆ ನಿಯೋಜಿಸುವಲ್ಲಿ ವಿಫಲವಾಗಿದೆ. ಒಟ್ನಲ್ಲಿ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಿ ತಮ್ಮ ಆಕ್ರೋಶವನ್ನು ಶಾಂತಿಯುತ ಮಾರ್ಗದಲ್ಲಿ ತೋರಿಸಲಿ ಎನ್ನುವುದು ಸುವರ್ಣ ನ್ಯೂಸ್​ ಆಶಯ.