ಗೋಮಾರಾಟ ನಿರ್ಬಂಧ: ತಡೆ ನೀಡಲು ಸುಪ್ರೀಂ ನಕಾರ; ವಿವರಣೆ ನೀಡುವಂತೆ ಸರಕಾರಕ್ಕೆ ಸೂಚನೆ
ಅಖಿಲ ಭಾರತ ಜಯಾಯಿತುಲ್ ಖುರೇಷ್ ಕ್ರಿಯಾ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಈ ಅಧಿಸೂಚನೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್'ನಲ್ಲಿ ಅರ್ಜಿ ಸಲ್ಲಿಸಿವೆ. ಈ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ಇದೀಗ ಸರಕಾರದಿಂದ ವಿವರಣೆ ಕೋರಿದೆ.
ನವದೆಹಲಿ(ಜೂನ್ 15): ಗೋಹತ್ಯೆ, ಗೋ ಮಾರಾಟ ಸಂಬಂಧ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಆದರೆ, ಗೋಹತ್ಯೆ ಜಾರಿಗೊಳಿಸಲು ಕಾರಣಗಳೇನು ಎಂದು ಪ್ರಶ್ನಿಸಿರುವ ಸರ್ವೋಚ್ಚ ನ್ಯಾಯಾಲಯವು ಎರಡು ವಾರದಲ್ಲಿ ಈ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಜುಲೈ 11ರಂದು ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ಕಳೆದ ಮೇ 23ರಂದು ಕೇಂದ್ರ ಪರಿಸರ ಸಚಿವಾಲಯವು ಗೋ ಮಾರಾಟಕ್ಕೆ ನಿರ್ಬಂಧಗಳನ್ನು ವಿಧಿಸಿ ಅಧಿಸೂಚನೆ ಹೊರಡಿಸಿತ್ತು. ಹಸು, ಎತ್ತು, ಎಮ್ಮೆ, ಕೋಣ, ಒಂಟೆ ಇವುಗಳನ್ನು ಕಸಾಯಿಖಾನೆಗೆ ಅನಧಿಕೃತವಾಗಿ ಮಾರಾಟ ಮಾಡುವುದೂ ಸೇರಿದಂತೆ ಕೆಲವಾರು ನಿರ್ಬಂಧಗಳನ್ನು ವಿಧಿಸಿ ಅಧಿಸೂಚನೆ ಹೊರಡಿಸಲಾಗಿದೆ. ಸರಕಾರದ ಈ ನಿರ್ಧಾರಕ್ಕೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಖಿಲ ಭಾರತ ಜಯಾಯಿತುಲ್ ಖುರೇಷ್ ಕ್ರಿಯಾ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಈ ಅಧಿಸೂಚನೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್'ನಲ್ಲಿ ಅರ್ಜಿ ಸಲ್ಲಿಸಿವೆ. ಈ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ಇದೀಗ ಸರಕಾರದಿಂದ ವಿವರಣೆ ಕೋರಿದೆ.
ಜುಲೈ 11ರಂದು ಮುಂದಿನ ವಿಚಾರಣೆ ನಡೆಸಲು ದಿನಾಂಕ ನಿಗದಿಯಾಗಿದೆ. ಅಂದು ಕೇಂದ್ರ ಸರಕಾರದ ಅಧಿಸೂಚನೆಗೆ ತಡೆ ನೀಡಬೇಕೋ, ಬೇಡವೋ ಎಂಬುದನ್ನ ಕೋರ್ಟ್ ನಿರ್ಧರಿಸುವ ಸಾಧ್ಯತೆ ಇದೆ.