ಸಕ್ಕರೆ ಉದ್ಯಮದಲ್ಲಿನ ತೊಡಕುಗಳನ್ನು ನಿವಾರಿಸಲು ಕೇಂದ್ರ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಒಟ್ಟು 8,500 ಕೋಟಿ ರೂ ಸಹಾಯಧನ ಘೋಷಣೆ ಮಾಡುವ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದೆ.

ನವದೆಹಲಿ (ಜೂ.6): ಸಕ್ಕರೆ ಉದ್ಯಮಕ್ಕಾಗಿ 8,500 ಕೋಟಿ ರೂ. ಸಹಾಯಧನ ನೀಡಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಎಥೆನಾಲ್ ಉತ್ಪಾದನಾ ಸಾಮರ್ಥ್ಯ ಹಾಗೂ 3 ಮಿಲಿಯನ್ ಟನ್ ನಷ್ಟು ದಾಸ್ತಾನಿನ ಪೂರೈಕೆ ಹೆಚ್ಚಿಸಲು 4500 ಕೋಟಿ ಮೃದು ಸಾಲ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಥೆನಾಲ್ ಉತ್ಪಾದನಾ ಸಾಮರ್ಥ್ಯವನ್ನು ಸೃಷ್ಟಿಸಲು ಸಾಲದ ಮೇಲೆ 1,300 ಕೋಟಿ ರೂ. ಸಹಾಯಧನವನ್ನು ಕೂಡಾ ಘೋಷಿಸಲಾಗಿದೆ. ಕಬ್ಬಿನಿಂದ ಹೊರತೆಗೆಯಲಾದ ಎಥೆನಾಲ್ ಅನ್ನು ಪೆಟ್ರೋಲ್ ನಲ್ಲಿ ಮಿಶ್ರಣವನ್ನಾಗಿ ಬಳಸಲು ಮತ್ತು ಕಬ್ಬು ಬೆಳೆಗಾರರಿಗೆ ಸಹಾಯಧನ ಒದಗಿಸಲು ತೀರ್ಮಾನಿಸಲಾಗಿದೆ. ಸಕ್ಕರೆ ಬೆಳೆಗಾರರ ಸಾಲ ಮನ್ನಾ ಮಾಡಲು ಸಕ್ಕರೆ ಗಿರಣಿಗಳಿಗೆ ಬಾಕಿ ಮೊತ್ತವನ್ನು ನೇರ ವರ್ಗಾವಣೆ ಮೂಲಕ ಪಾವತಿಸಲು 1, 540 ಕೋಟಿ ರೂ. ಪ್ಯಾಕೇಜ್ ನ್ನು ಘೋಷಿಸಲಾಗಿದೆ.

ಸಕ್ಕರೆ ಆಮದು ಸುಂಕವನ್ನು ಕೇಂದ್ರಸರ್ಕಾರ ಈಗಾಗಲೇ ಎರಡು ಪಟ್ಟು ಹೆಚ್ಚಿಸಲಾಗಿದೆ. ಸ್ವದೇಶಿ ಬೆಲೆ ಹೆಚ್ಚಿಸವ ನಿಟ್ಟಿನಲ್ಲಿ ರಪ್ತು ಸುಂಕವನ್ನು ಕಡಿಮೆ ಮಾಡಲಾಗಿದೆ. ಎರಡು ಮಿಲಿಯನ್ ಟನ್ ಸಕ್ಕರೆಯನ್ನು ರಪ್ತು ಮಾಡುವಂತೆ ಉದ್ಯಮಗಳನ್ನು ಕೋರಲಾಗಿದೆ. ಸಕ್ಕರೆ ಉದ್ಯಮದ ಕುರಿತಾಗಿ ಇಂದಿನ ಕೇಂದ್ರ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನ ಕ್ರಾಂತಿಕಾರಕ ಎಂದು ಬಣ್ಣಿಸಲಾಗುತ್ತಿದೆ.