ಶಿರಾದಲ್ಲಿ ಘಟನೆ. ಬಸ್‌ ಚಾಲಕ ನಾಗರಾಜ ಸಾವು

ಶಿರಾ: ಹೃದಯಾಘಾತಕ್ಕೆ ಒಳಗಾಗಿದ್ದರೂ ಚಾಲಕ ಬ್ರೇಕ್‌ ಹಾಕಿ ಬಸ್‌ ನಿಲ್ಲಿಸಿ 35 ಜನರ ಪ್ರಾಣ ಉಳಿಸಿದ ಘಟನೆ ತುಮಕೂರು ಜಿಲ್ಲೆ ಶಿರಾದ ಸಮೀಪದ ಲಕ್ಕನಹಳ್ಳಿ ಸಮೀಪ ನಡೆದಿದೆ. ಮಧುಗಿರಿ ನಿವಾಸಿ, ಚಾಲಕ ನಾಗರಾಜು (45) ಹೃದಯಾಘಾತದಿಂದ ಮೃತಪಟ್ಟವರು.

ಅಮರಾಪುರದಿಂದ ಶಿರಾ ಕಡೆಗೆ ನಾಗರಾಜು ಖಾಸಗಿ ಬಸ್‌ ಅನ್ನು ಚಲಾಯಿಸಿಕೊಂಡು ಬರುತ್ತಿದ್ದರು. ಬೆಳಗ್ಗೆ 7ಕ್ಕೆ ಲಕ್ಕನಹಳ್ಳಿ ಬಸ್‌ ನಿಲ್ದಾಣಕ್ಕೆ ಬಂದಿದೆ. ಬಸ್ಸಿನಲ್ಲಿ 35 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಲಕ್ಕನಹಳ್ಳಿ ಬಿಟ್ಟಸ್ವಲ್ಪ ಸಮಯದಲ್ಲೇ ನಾಗರಾಜು ಎದೆ ಮೇಲೆ ಕೈ ಇಟ್ಟುಕೊಂಡು ನೋವಿನಿಂದ ಬಳಲುತ್ತಲೇ ತಕ್ಷಣ ಬಸ್‌ನ ಬ್ರೇಕ್‌ ಒತ್ತಿದ್ದಾರೆ. ಈ ವೇಳೆ ಒಂದು ಹಂತದಲ್ಲಿ ಬಸ್ಸು ರಸ್ತೆ ಬದಿಗೆ ಹೋಗಿದೆ. ಅಷ್ಟರಲ್ಲಾಗಲೇ ನಾಗರಾಜು ಮೃತಪಟ್ಟಿದ್ದಾರೆ. ಆಗ ಪಕ್ಕದಲ್ಲೇ ಕುಳಿತಿದ್ದ ಬಸ್‌ ಏಜೆಂಟ್‌ ಮಾರುತಿ ಬಸ್‌ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದಾಗಿ ಬಸ್‌ ಹಳ್ಳಕ್ಕೆ ಉರುಳುವುದು ತಪ್ಪಿದೆ. ಘಟನೆ ವೇಳೆ ಬಸ್‌ನ ಮುಂಭಾಗದ ಒಂದು ಚಕ್ರ ರಸ್ತೆ ಬಿಟ್ಟು ಹಳ್ಳಕ್ಕೆ ಇಳಿದಿತ್ತು. ಈ ಸಂಬಂಧ ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(epaper.kannadaprabha.in)