ಕರುಣಾಗೆ ಮರೀನಾ: ವಿಚಾರಣೆ ಮುಂದೂಡಿಕೆ
- ಕಲೈನಾರ್ ನಿಧನದ ಬೆನ್ನಲ್ಲೇ ಭುಗಿಲೆದ್ದ ಅಂತ್ಯಸಂಸ್ಕಾರದ ವಿವಾದ
- ಮರೀನಾ ಬೀಚ್ಗೆ ಡಿಎಂಕೆ ಪಟ್ಟು; ಆಗಲ್ಲ ಎಂದ ಸರ್ಕಾರ; ಹೈಕೋರ್ಟ್ಗೆ ಮೊರೆ
ಚೆನ್ನೈ: ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅಂತ್ಯ ಸಂಸ್ಕಾರವನ್ನು ಮರೀನಾ ಬೀಚ್ನಲ್ಲಿ ನಡೆಸುವ ಅರ್ಜಿಯ ವಿಚಾರಣೆಯನ್ನು ಬುಧವಾರ ಬೆಳಗ್ಗೆ 8 ಗಂಟೆಗೆ ಮುಂದೂಡಲಾಗಿದೆ.
ಮಂಗಳವಾರ ತಡರಾತ್ರಿ ಈ ಬಗ್ಗೆ ವಾದ-ಪ್ರತಿವಾದವನ್ನು ಆಲಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ರನ್ನೊಳಗೊಂಡ ದ್ವಿಸದಸ್ಯ ಪೀಠ, ತಮಿಳುನಾಡು ಸರ್ಕಾರ ಕಾಲಾವಕಾಶ ಕೋರಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಬುಧವಾರ ಬೆಳಗ್ಗೆ 8 ಗಂಟೆಗೆ ಮುಂದೂಡಿದೆ.
ಮರೀನಾ ಬೀಚ್ನಲ್ಲಿ ಅಣ್ಣಾ ಸ್ಮಾರಕ ಬಳಿ ಅಂತ್ಯಸಂಸ್ಕಾರ ನಡೆಸಲು ತಮಿಳುನಾಡು ಸರ್ಕಾರ ಅವಕಾಶ ನಿರಾಕರಿಸಿದ್ದು, ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಡಿಎಂಕೆ ಹೈಕೋರ್ಟ್ ಮೆಟ್ಟಿಲೇರಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ , ಮಂಗಳವಾರ ರಾತ್ರಿಯೇ ಈ ಅರ್ಜಿಯ ವಿಚಾರಣೆ ನಡೆಸಲು ಸಮ್ಮತಿಸಿದ್ದರು. ಮುಖ್ಯ ನ್ಯಾಯಮೂರ್ತಿ ನಿವಾಸದಲ್ಲೇ ಈ ಅರ್ಜಿಯ ವಿಚಾರಣೆ ನಡೆದುದರಿಂದ, ನಿವಾಸದ ಹೊರಗಡೆ ಹೈಡ್ರಾಮಾವೇ ನಡೆಯಿತು.
ಈ ನಡುವೆ, ಮರೀನಾ ಬೀಚ್ ನಲ್ಲಿ ಅಂತ್ಯಸಂಸ್ಕಾರ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಲಾಗಿರುವ 5 ಅರ್ಜಿಗಳ ಪೈಕಿ 4 ಅರ್ಜಿದಾರರು ತಮ್ಮ ಅರ್ಜಿಯನ್ನು ವಾಪಾಸು ಪಡೆದಿದ್ದಾರೆನ್ನಲಾಗಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದ ಪರಮೋಚ್ಛ ನೇತಾರ ಮುತ್ತುವೇಲ್ ಕರುಣಾನಿಧಿ ಮಂಗಳವಾರ ಸಾಯಂಕಾಲ ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.