ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ‘ರಾಜ್ಯದಲ್ಲಿ ಸಂಘಟನೆ ಕಟ್ಟಿ ಬೆಳೆಸಿದವರಲ್ಲಿ ಸಂತೋಷ್ ಸಹ ಒಬ್ಬರು. ಇಂಥವರ ಬಗ್ಗೆ ಯಡಿಯೂರಪ್ಪ ಹಗುರವಾಗಿ ಮಾತನಾಡಿದ್ದು ತಪ್ಪು’ ಎಂದು ಹೇಳಿದ್ದಾರೆ.

ಬೆಂಗಳೂರು/ ದಾವಣಗೆರೆ ((ಮೇ.03): ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ‘ರಾಜ್ಯದಲ್ಲಿ ಸಂಘಟನೆ ಕಟ್ಟಿ ಬೆಳೆಸಿದವರಲ್ಲಿ ಸಂತೋಷ್ ಸಹ ಒಬ್ಬರು. ಇಂಥವರ ಬಗ್ಗೆ ಯಡಿಯೂರಪ್ಪ ಹಗುರವಾಗಿ ಮಾತನಾಡಿದ್ದು ತಪ್ಪು’ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಡಿಯೂರಪ್ಪ ಅವರಿಗೆ ತಾವು ಆಡಿದ್ದು ತಪ್ಪು ಎನಿಸಿದರೆ ಸಂತೋಷ್ ಬಳಿ ಕ್ಷಮೆ ಕೋರುವಂತೆ ಪ್ರಾರ್ಥಿಸುವೆ ಎಂದೂ ಅವರು ಹೇಳಿದ್ದಾರೆ.

ಹರಿಹರ ತಾಲೂಕು ಬೆಳ್ಳೂಡಿ ಕನಕ ಗುರುಪೀಠದ ಶಾಖಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂಘ ಪರಿವಾರದ ಹಿರಿಯ ಪ್ರಚಾರಕ ಬಿ.ಎಲ್.ಸಂತೋಷ್ ಒಬ್ಬ ವ್ಯಕ್ತಿಯಲ್ಲ. ಸಂಘದ ಪ್ರತಿನಿಧಿಯಾಗಿ ಬಿಜೆಪಿ ರಾಷ್ಟ್ರೀಯ ನಾಯಕನಾಗಿ ಬೆಳೆದವರ ಬಗ್ಗೆ ಯಡಿಯೂರಪ್ಪ ಹಗುರವಾಗಿ ಮಾತನಾಡಿದ್ದು ಲಕ್ಷಾಂತರ ಕಾರ್ಯಕರ್ತರಿಗೆ ನೋವನ್ನುಂಟು ಮಾಡಿದೆ. ಸಂತೋಷ್ ಬಳಿ ಕ್ಷಮೆ ಕೋರಿ ಕಾರ್ಯಕರ್ತರ ನೋವನ್ನೂ ರಾಜ್ಯಾಧ್ಯಕ್ಷರು ನಿವಾರಣೆ ಮಾಡಲಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮುಸುಕಿನ ಗುದ್ದಾಟ ನಡೆದಿದೆ. ಬಿಜೆಪಿಯ ಆಂತರಿಕ ವಿಚಾರ ಬಹಿರಂಗವಾಗಬಾರದಿತ್ತು. ಇದು ಒಂದು ಕುಟುಂಬದ ಸಮಸ್ಯೆಯಾಗಿದ್ದು, ನಾವೇ ಕುಳಿತುಕೊಂಡು ಪರಿಹರಿಸಿಕೊಳ್ಳುತ್ತೇವೆ. ಕಾಂಗ್ರೆಸ್- ಜೆಡಿಎಸ್‌ಗೆ ರಾಜ್ಯದಲ್ಲಿ ಕೇಳುವವರೂ ಇಲ್ಲ. ಆದರೆ, ಬಿಜೆಪಿಯಲ್ಲಿ ಹೇಳುವವರು, ಕೇಳುವವರೂ ಇದ್ದಾರೆ. ಜ.೨೭ಕ್ಕೆ ಗೊಂದಲ ನಿವಾರಿಸಲು ಯಡಿಯೂರಪ್ಪಗೆ ರಾಷ್ಟ್ರೀಯ ನಾಯಕರು ಸೂಚಿಸಿದ್ದರು. ಇನ್ನೂ ರಾಜ್ಯಾಧ್ಯಕ್ಷರು ಸಮಸ್ಯೆ ನಿವಾರಿಸಿಲ್ಲ ಎಂದು ಹೇಳಿದರು.

ಸಂತೋಷ್ ವಿಚಾರ ಮುಂದಿಟ್ಟು ಸಭೆಗೆ ಗೈರು?

ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ವಿರುದ್ಧ ಯಡಿಯೂರಪ್ಪ ಅವರು ಮಾತನಾಡಿರುವುದನ್ನೇ ಮುಂದಿಟ್ಟುಕೊಂಡು ಈಶ್ವರಪ್ಪ ಅವರು ಮೈಸೂರಿನ ಕಾರ್ಯಕಾರಿಣಿ ಸಭೆಗೆ ಗೈರುಹಾಜರಾಗುವ ಸಾಧ್ಯತೆಯಿದೆ.

ಸಂಘದ ಪ್ರಚಾರಕರಾಗಿರುವ ಅವರ ಹೆಸರನ್ನು ಪ್ರಸ್ತಾಪಿಸಿ ಯಡಿಯೂರಪ್ಪ ಅವರು ಆಪಾದನೆ ಮಾಡಿದ್ದು ತಪ್ಪು. ಜತೆಗೆ ಸಂಘ ಮೂಲದ ಭಾನುಪ್ರಕಾಶ್ ಮತ್ತು ನಿರ್ಮಲಕುಮಾರ್ ಸುರಾನಾ ಅವರನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ದು ಸರಿಯಲ್ಲ ಎನ್ನುತ್ತಿರುವ ಈಶ್ವರಪ್ಪ ಅವರು ಈ ಮೂಲಕ ಸಂಘ ಪರಿವಾರದ ಮುಖಂಡರು ಹಾಗೂ ಕಾರ್ಯಕರ್ತರ ಒಲವು ಗಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಹೀಗಾಗಿ, ಈ ತಿಂಗಳ 6 ಮತ್ತು 7 ರಂದು ಮೈಸೂರಿನಲ್ಲಿ ನಡೆಯುವ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ಬದಲು ಗೈರಾಗುವುದೇ ಸೂಕ್ತ ಎಂಬ ಚಿಂತನೆಯಲ್ಲಿರುವ ಈಶ್ವರಪ್ಪ ಅವರು, ಇನ್ನೆರಡು ದಿನಗಳಲ್ಲಿ ತಮ್ಮ ಆಪ್ತರೊಂದಿಗೆ ಮಾತುಕತೆ ನಡೆಸಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದ್ದಾರೆ. 

ಬ್ರಿಗೇಡ್ ಸ್ಥಾಪನೆಯಾಗಿ ಮೂರು ತಿಂಗಳಾಗಿಲ್ಲ. ನಿಲ್ಲಿಸಬೇಕು ಎಂದು ಇವರಾಗೇ ಇವರು (ಯಡಿಯೂರಪ್ಪ) ಹೇಳಿದರೆ ನಿಲ್ಲಿಸಲಾದೀತೆ? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಮಾತು ಕೇಳುವವನು ನಾನು. ಹಿಂದುಳಿದವರು, ದಲಿತರು, ಬಡವರನ್ನು ಈ ಬ್ರಿಗೇಡ್ ಮೂಲಕ ಸಂಘಟಿಸುತ್ತಿದ್ದೇವೆ.

- ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ