ನಮ್ಮ ಪಕ್ಷದ ನಿರ್ದೇಶನದಂತೆ ವಿಶ್ವಾಸಮತಕ್ಕೆ ಗೈರಾಗಿದ್ದೆ ಎಂದ ಶಾಸಕ
ರಾಜ್ಯದಲ್ಲಿ ದೋಸ್ತಿ ಸರ್ಕಾರ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಅಧಿಕಾರಕ್ಕೆ ಏರಿದೆ. ಇದೇ ಸಂದರ್ಭದಲ್ಲಿ ಶಾಸಕರೋರ್ವರು ತಮ್ಮ ಪಕ್ಷದ ನಿರ್ದೇಶನದಂತೆ ವಿಶ್ವಾಸಮತಕ್ಕೆ ಗೈರಾಗಿದ್ದಾಗಿ ಹೇಳಿದ್ದಾರೆ.
ಬೆಂಗಳೂರು [ಅ.01]: ಸಮ್ಮಿಶ್ರ ಸರ್ಕಾರದ ಬಹುಮತ ಸಾಬೀತುಪಡಿಸುವ ವೇಳೆ ವಿಧಾನಸಭಾ ಕಲಾಪಕ್ಕೆ ಗೈರು ಹಾಜರಾದ ಕುರಿತು ಬಿಎಸ್ಪಿ ಶಾಸಕ ಎನ್.ಮಹೇಶ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವರಣೆ ನೀಡಿದರು.
ಕಲಾಪ ಆರಂಭವಾಗುವ ಮುನ್ನ ಪ್ರತಿಪಕ್ಷದ ಮೊಗಸಾಲೆಯಲ್ಲಿ ಉಭಯ ನಾಯಕರು ಮಾತನಾಡಿಕೊಂಡಿದ್ದು, ಈ ವೇಳೆ ಪಕ್ಷದ ನಿರ್ದೇಶನದಂತೆ ಗೈರು ಹಾಜರಾಗಿರುವುದಾಗಿ ಮಹೇಶ್ ಸ್ಪಷ್ಟನೆ ನೀಡಿದರು.
ಪಕ್ಷದಿಂದ ಅಮಾನತುಗೊಳಿಸಿರುವುದಕ್ಕೆ ಕಾರಣವೇನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹೇಶ್, ಅದು ಗೊತ್ತಿಲ್ಲ. ಅವರ ಕಾರ್ಯವೈಖರಿ ಗೊತ್ತಲ್ವಾ ಎಂದು ಹೇಳಿದರು.
ನಂತರ ಮಾತನಾಡಿದ ಸಿದ್ದರಾಮಯ್ಯ, ರಾಜಕೀಯವಾಗಿ ಒಂದು ನಿಲುವನ್ನು ಹೊಂದಿರಬೇಕು. ಜಾತ್ಯತೀತ ನಿಲುವಿನ ಜತೆಗೆ ಇರಿ ಎಂದು ಸಲಹೆ ನೀಡಿದರು.