ವಿವಿಧ ಘಟಕಗಳು, ಕಾರ್ಯಾಗಾರ, ತರಬೇತಿ ಕೇಂದ್ರಗಳಲ್ಲಿ ಪುಸ್ತಕ ಹಾಜರಾತಿ ವ್ಯವಸ್ಥೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಏಕಮಾದರಿ ಹಾಜರಾತಿ ವ್ಯವಸ್ಥೆ ಜಾರಿಗಾಗಿ ಆಧಾರ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಬೆಂಗಳೂರು(ನ.27): ಸಿಬ್ಬಂದಿ ಹಾಜರಾತಿ ಹಾಗೂ ಕಾರ್ಯ ವೈಖರಿ ಮೇಲೆ ನಿಗಾವಹಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಸಾರಿಗೆ ನಿಗಮವು (ಬಿಎಂಟಿಸಿ) ಆಧಾರ್ ಆಧಾರಿತ ನೂತನ ಹಾಜರಾತಿ ವ್ಯವಸ್ಥೆ ಜಾರಿಗೆ ಸಿದ್ಧತೆಯಲ್ಲಿ ತೊಡಗಿದೆ. ನಿಗಮದಲ್ಲಿ ಚಾಲಕರು, ನಿರ್ವಾಹಕರು, ಅಧಿಕಾರಿಗಳು, ಕಾರ್ಯಾಗಾರಗಳು ಹಾಗೂ ತರಬೇತಿ ಕೇಂದ್ರಗಳ ಸಿಬ್ಬಂದಿ ಸೇರಿದಂತೆ ಸುಮಾರು 36 ಸಾವಿರ ಸಿಬ್ಬಂದಿ ಇದ್ದಾರೆ. ಈ ನೂತನ ವ್ಯವಸ್ಥೆಯ ಮೂಲಕ ನಿಗಮದ ಎಲ್ಲಾ ವರ್ಗದ ಸಿಬ್ಬಂದಿ ಹಾಜರಾತಿಯನ್ನು ಒಂದೇ ವ್ಯವಸ್ಥೆಯಡಿ ತರಲು ತೀರ್ಮಾನಿಸಲಾಗಿದೆ.

Add Asianetnews Kannada as a Preferred SourcegooglePreferred

ಪ್ರಸ್ತುತ ನಿಗಮದ ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಯಲ್ಲಿದೆ. ಉಳಿದಂತೆ ವಿವಿಧ ಘಟಕಗಳು, ಕಾರ್ಯಾಗಾರ, ತರಬೇತಿ ಕೇಂದ್ರಗಳಲ್ಲಿ ಪುಸ್ತಕ ಹಾಜರಾತಿ ವ್ಯವಸ್ಥೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಏಕಮಾದರಿ ಹಾಜರಾತಿ ವ್ಯವಸ್ಥೆ ಜಾರಿಗಾಗಿ ಆಧಾರ್ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಮೊದಲಿಗೆ ನಿಗಮದ ವ್ಯಾಪ್ತಿಯ ಘಟಕಗಳು, ತರಬೇತಿ ಕೇಂದ್ರಗಳು ಹಾಗೂ ಕಾರ್ಯಾಗಾರಗಳಲ್ಲಿ ಬಯೋಮೆಟ್ರಿಕ್ ಸಾಧನ ಅಳವಡಿಸಿ, ಅದಕ್ಕೆ ಸಿಬ್ಬಂದಿಯ ಆಧಾರ್ ಲಿಂಕ್ ಮಾಡಲಾಗುತ್ತದೆ.

ಇದನ್ನು ಕೇಂದ್ರ ಕಚೇರಿಯಲ್ಲಿರುವ ಇಂಟಲಿಜೆನ್ಸ್ ಟ್ರಾನ್ಸ್‌'ಪೋರ್ಟ್ ಸಲ್ಯೂಷನ್ಸ್‌'ಗೆ (ಐಟಿಎಸ್) ಸಂಪರ್ಕ ಕಲ್ಪಿಸುವ ಮೂಲಕ ನಿಗಮದ ಎಲ್ಲಾ ವರ್ಗದ ಸಿಬ್ಬಂದಿಯ ಹಾಜರಾತಿ ಹಾಗೂ ಕಾರ್ಯ ವೈಖರಿ ಮೇಲೆ ನಿಗಾವಹಿಸುವುದು ಈ ನೂತನ ವ್ಯವಸ್ಥೆಯ ಉದ್ದೇಶವಾಗಿದೆ.

ಈ ಉದ್ದೇಶಿತ ಆಧಾರ್ ಆಧಾರಿತ ಹಾಜರಾತಿ ವ್ಯವಸ್ಥೆಯಿಂದ ನಿಗಮದ ಎಲ್ಲಾ ವರ್ಗದ ಸಿಬ್ಬಂದಿ ಒಂದೆಡೆ ಬರುತ್ತಾರೆ. ಇದರಿಂದ ನಿಗಮದ ವಿವಿಧ ವಿಭಾಗಗಳಲ್ಲಿ ಆಯಾಯ ದಿನದ ಸಿಬ್ಬಂದಿ ಹಾಜರಾತಿ ಹಾಗೂ ಮಾಹಿತಿ, ಕಾರ್ಯ ವೈಖರಿ ಕುರಿತ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ. ಕಾರ್ಯ ನಿರ್ವಹಣೆಗೂ ಅನುಕೂಲವಾಗಲಿದೆ. ಹಾಗಾಗಿ ಈ ನೂತನ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.