‘ಸಂಪುಟ ವಿಸ್ತರಣೆಯಿಂದ ಸರ್ಕಾರ ಉಳಿಯಲಿದೆ ಎನ್ನುವ ಭ್ರಮೆ ಆಡಳಿತ ಪಕ್ಷದಲ್ಲಿ’
ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಪಕ್ಷಾಂತರದ ವಿಚಾರಗಳ ಚರ್ಚೆ ನಡೆಯುತ್ತಿದೆ. ಇತ್ತ ಆಡಳಿತ ಪಕ್ಷಗಳು ಸರ್ಕಾರ ಉಳಿಸುವ ಪ್ಲಾನ್ ಮಾಡುತ್ತಿವೆ.
ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು, ಇದಾದ ಬಳಿಕ ಪಕ್ಷಾಂತರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಯಾರು ಕಾಂಗ್ರೆಸ್ ತೊರೆಯಬಹುದು ಎನ್ನುವ ಅನುಮಾನ ಇದೆಯೋ ಅವರಿಗೆ ಸಚಿವ ಸ್ಥಾನ ಕೊಡುವುದಾಗಿ ಹೇಳಲಾಗುತ್ತಿದೆ. ಸಚಿವ ಸಂಪುಟ ವಿಸ್ತರಣೆಯಿಂದ ಸರ್ಕಾರ ಉಳಿಸಿಕೊಳ್ಳಬಹುದು ಎನ್ನುವ ಭ್ರಮೆ ಆಡಳಿತ ಪಕ್ಷದಲ್ಲಿದೆ. ಎಷ್ಟು ಜನಕ್ಕೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಪ್ರಶ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಶ್ನೆ ಮಾಡಿದ್ದಾರೆ.
ರಾಜ್ಯದಲ್ಲಿ ಇಂತಹ ವಿಚಾರಗಳಲ್ಲಿ ಆಡಳಿತ ಪಕ್ಷದ ನಾಯಕರು ಕಾಲ ಕಳೆಯುತ್ತಿದ್ದು, ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವರ ಬಳಿ ಇವರ ಬಳಿ ಕಿತ್ತು ಸಚಿವ ಸ್ಥಾನ ನೀಡುವುದರಿಂದ ಏನು ಬಂತು. ನಮ್ಮೊಂದಿಗೆ ಯಾವ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿ ಇಲ್ಲ. ಸಂಪರ್ಕದಲ್ಲಿ ಇಟ್ಟು ಕೊಳ್ಳುವ ಕೆಲಸ ನಾನು ಮಾಡುವುದೂ ಇಲ್ಲ. ನಮಗೆ ಅವಶ್ಯಕತೆ ಇಲ್ಲ ಎಂದರು.
ಇನ್ನು ನರೇಂದ್ರ ಮೋದಿ ಅವರು ಕರ್ನಾಟಕದ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಿದ್ದು, ಕರ್ನಾಟಕದ ಬಗ್ಗೆ ಹೆಚ್ಚು ಗಮನವಿದೆ. ಅಲ್ಲದೇ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನ ಮಾನ ಸಿಗುವ ನಿರೀಕ್ಷೆ ಇದೆ ಎಂದರು.