ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್ - ಜೆಡಿಎಸ್ ಬಂಡಾಯ ಶಾಸಕರು..?
ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದ್ದು ಸಂಪುಟ ರಚನೆ ಮಾತ್ರ ಇನ್ನೂ ಕೂಡ ಕಗ್ಗಂಟಾಗಿಯೇ ಉಳಿದಿದೆ. ಸಂಪುಟ ವಿಸ್ತರಣೆಯಾದ ಬಳಿಕ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ತಪ್ಪಿದರೆ ಕೈ ನಾಯಕರು ಬಂಡಾಯ ಏಳುವ ಬಗ್ಗೆ ಗುಪ್ತಚರ ಇಲಾಖೆಯಿಂದ ಇದೀಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಬೆಂಗಳೂರು : ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದ್ದು ಸಂಪುಟ ರಚನೆ ಮಾತ್ರ ಇನ್ನೂ ಕೂಡ ಕಗ್ಗಂಟಾಗಿಯೇ ಉಳಿದಿದೆ. ಸಂಪುಟ ವಿಸ್ತರಣೆಯಾದ ಬಳಿಕ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ತಪ್ಪಿದರೆ ಕೈ ನಾಯಕರು ಬಂಡಾಯ ಏಳುವ ಬಗ್ಗೆ ಗುಪ್ತಚರ ಇಲಾಖೆಯಿಂದ ಇದೀಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಈ ಬಗ್ಗೆ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರಿಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಸದ್ಯ ಸಂಪುಟ ರಚನೆಗಾಗಿ ಕೈ ನಾಯಕರು ಕಾಯುತ್ತಿದ್ದು, ಸಚಿವ ಸ್ಥಾನ ವಂಚಿತರಾದರೆ ಬಿಜೆಪಿ ಸಂಪರ್ಕ ಮಾಡುವ ಸಾಧ್ಯತೆಗಳು ಹೆಚ್ಚಿದೆ.
ಜೆಡಿಎಸ್ನ ಒಂದಿಬ್ಬರೂ ಶಾಸಕರೂ ಕೂಡ ಬಿಜೆಪಿ ಸಂಪರ್ಕ ಸಾಧ್ಯತೆ ಇದೆ. ಆದ್ದರಿಂದ ಹೆಚ್ಚು ಜಾಣ್ಮೆಯಿಂದ ಸಚಿವ ಸಂಪುಟವನ್ನು ರಚನೆ ಮಾಡುವ ಹೊಣೆ ಇದೀಗ ನಾಯಕರ ಮೇಲಿದೆ.
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್, ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್, ಶಿವಾನಂದ ಪಾಟೀಲ್, ರಾಜಶೇಖರ್ ಪಾಟೀಲ್ ಹುಮ್ನಾಬಾದ್, ಬಿ.ಸಿ ಪಾಟೀಲ್, ಕಂಪ್ಲಿ ಶಾಸಕ ಗಣೇಶ್, ಆನಂದ ಸಿಂಗ್, ಪ್ರತಾಪ್ ಗೌಡ ಪಾಟೀಲ್ ಸೇರಿದಂತೆ ಕಾಂಗ್ರೆಸ್ ನ 11 ಶಾಸಕರ ಪಟ್ಟಿಯನ್ನು ಸಿಎಂಗೆ ಗುಪ್ತಚರ ಇಲಾಖೆ ಕೊಟ್ಟಿದೆ.
ಅವಕಾಶವಂಚಿತರು ಯಾವುದೇ ಗಳಿಗೆಯಲ್ಲಿ ಬೇಕಾದರೂ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಸಂಪರ್ಕಿಸಬಹುದು ಎಂದು ಗುಪ್ತಚರ ಇಲಾಖೆಯು ಹೇಳಿದೆ. ಗುಪ್ತಚರ ಇಲಾಖೆಯು ನೀಡಿದ ಈ ಎಚ್ಚರಿಕೆಯನ್ನು ಸಿಎಂ ಕುಮಾರಸ್ವಾಮಿ ಇದೀಗ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಸಂಪುಟ ರಚನೆ ಕಗ್ಗಂಟು ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಾಗಿದೆ.