ಬಿಜೆಪಿ ಸಂಸದನಿಂದಲೇ ಮೋದಿ ಸರ್ಕಾರದ ವಿರುದ್ಧ ಮತದಾನ..?
ನಾಳೆ ಬಿಜೆಪಿ ನೇತೃತ್ವದ ಎನ್ ಡಿಎ ಪಡೆಗೆ ಅಗ್ನಿ ಪರೀಕ್ಷೆ ಎದುರಾಗುತ್ತಿದೆ. ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡನೆಯಾಗುತ್ತಿದೆ.
ನವದೆಹಲಿ : ನಟ ಹಾಗೂ ಹಿರಿಯ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಹೆಸರಿಗೆ ಮಾತ್ರ ಬಿಜೆಪಿ ಎಂಪಿಯಾಗಿದ್ದಾರೆ. ನಾಳೆ ಮೋದಿ ಸರ್ಕಾರದ ವಿರುದ್ಧ ಟಿಡಿಪಿ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡನೆ ಮಾಡುತ್ತಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಪರವಾಗಿ ಮತ ಚಲಾಯಿಸುತ್ತಾರೋ ಅಥವಾ ಅವಿಶ್ವಾಸ ನಿರ್ಣಯದ ಪರ ಮತ ಚಲಾಯಿಸುತ್ತಾರೋ ಎನ್ನುವ ಪ್ರಶ್ನೆ ಇದೀಗ ಮೂಡಿದೆ.
ಪಕ್ಷದಲ್ಲಿದ್ದುಕೊಂಡೇ ಪದೇ ಪದೇ ಬಿಜೆಪಿ ಬಗ್ಗೆ ವಾಗ್ದಾಳಿ ನಡೆಸುತ್ತಿರುವ ಶತ್ರುಘ್ನ ಸಿನ್ಹಾ ಅವರ ನಿರ್ಧಾರ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಅವರು ಪದೇ ಪದೇ ಬಿಜೆಪಿ ಹಾಗೂ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಸಾಮಾನ್ಯವಾಗಿದ್ದು, ಈ ನಿಟ್ಟಿನಲ್ಲಿ ಅವರ ಮತದ ಬಗ್ಗೆ ಕುತೂಹಲ ಮೂಡಿದೆ.
ಸದ್ಯ ಬಿಜೆಪಿಯು 273 ಸದಸ್ಯ ಬಲವನ್ನು ಹೊಂದಿದ್ದು, ಆದರೆ ಸಿನ್ಹಾ ಅವರ ಮತದ ಬಗ್ಗೆ ಮಾತ್ರ ಅನುಮಾನಗಳಿದೆ. ಈಗಾಗಲೇ ಟಿಡಿಪಿ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡನೆಗೆ ಸ್ಪೀಕರ್ ಒಪ್ಪಿಗೆ ಸೂಚಿಸಿದ್ದು, ನಾಳೆ ಅಧಿವೇಶನದಲ್ಲಿ ಬಿಜೆಪಿಗೆ ಅಗ್ನಿ ಪರೀಕ್ಷೆ ಎದುರಾಗಲಿದೆ.