ಯೋಧನ ಅಂತ್ಯಕ್ರಿಯೆ ವೇಳೆ ಬಿಜೆಪಿ ಮುಖಂಡರ ಶೂ ಬಿಚ್ಚಿಸಿದ ಸಂಬಂಧಿಗಳು
ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರೋರ್ವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕರ ಬಳಿ ಸಂಬಂಧಿಗಳು ಅನುಚಿತವಾಗಿ ವರ್ತಿಸಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಲಕ್ನೋ : ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರೋರ್ವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕರ ಬಳಿ ಸಂಬಂಧಿಗಳು ಅನುಚಿತವಾಗಿ ವರ್ತಿಸಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಉತ್ತರ ಪ್ರದೇಶದ ಯೋಧ ಅಜಯ್ ಸಿಂಗ್ ಅವರ ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್, ರಾಜ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ , ಮೀರತ್ ಬಿಜೆಪಿ ಮುಖಂಡ ರಾಜೇಂದ್ರ ಅಗರ್ವಾಲ್ ಪಾಲ್ಗೊಂಡಿದ್ದರು. ಎಲ್ಲರೂ ಕೂಡ ಶೂ ಧರಿಸಿ ಕುಳಿತುಕೊಂಡಿದ್ದರು.
ಈ ವೇಳೆ ಮುಖಂಡರ ಬಳಿ ಬಂದ ಯೋಧನ ಸಂಬಂಧಿಗಳು ಶೂ ತೆಗೆಸಿದ್ದು, ಸಚಿವರ ಬಳಿ ಜೋರಿನ ಧ್ವನಿಯಲ್ಲಿ ಮಾತನಾಡಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ವೇಳೆ ಸಚಿವರು ಸಂಬಂಧಿಗಳಿಗೆ ಕೈ ಮುಗಿದು ಕ್ಷಮೆ ಕೇಳಿದ್ದು, ಶೂ ಬಿಚ್ಚಿರುವ ದೃಶ್ಯವೂ ವಿಡಿಯೋದಲ್ಲಿದೆ.
ಆದರೆ ಇನ್ನೊಂದು ವಿಡಿಯೋ ಕೂಡ ವೈರಲ್ ಆಗಿದ್ದು, ವಿಡಿಯೋದಲ್ಲಿ ಸಚಿವರು ನಗುತ್ತಾ ಮಾತನಾಡುತ್ತಾ ಕುಳಿತಿ೪ರುವ ದೃಶ್ಯ ಕಂಡು ಬಂದಿದೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಫೆ.14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಜೈಶ್ ಇ ಮೊಹಮ್ಮದ್ ಸಂಘಟನೆ ಸೇರಿದ ಉಗ್ರ ಆದಿಲ್ ದಾರ್ ಸ್ಫೋಟಕ ತುಂಬಿದ ಕಾರನ್ನು ಯೋಧರಿದ್ದ ಬಸ್ ಗೆ ಡಿಕ್ಕಿ ಹೊಡೆಸಿದ್ದು, ಈ ವೇಳೆ 40 ಯೋಧರು ಹುತಾತ್ಮರಾಗಿದ್ದರು.