ಎಲೆಕ್ಟ್ರಾನಿಕ್ ಮತಯಂತ್ರಗಳ ಬಗೆಗಿನ ಆಪಾದನೆ ಇಂದು ನಿನ್ನೆಯದಲ್ಲ. ಪ್ರತೀ ಚುನಾವಣೆಗಳ ಫಲಿತಾಂಶದ ನಂತರವೂ ಆರೋಪಗಳು ಕೇಳಿ ಬರುತ್ತವೆ. ಅದೇ ರೀತಿ ನಿವೃತ್ತ ಚುನಾವಣಾ ಆಯುಕ್ತರೊಬ್ಬರು ಇವಿಎಂ ದೋಷದ ಕುರಿತು ಮಾತನಾಡಿದ್ದಾರೆ ಎನ್ನಲಾದ ವಿಷಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನವದೆಹಲಿ (ಜ.15): ಎಲೆಕ್ಟ್ರಾನಿಕ್ ಮತಯಂತ್ರಗಳ ಬಗೆಗಿನ ಆಪಾದನೆ ಇಂದು ನಿನ್ನೆಯದಲ್ಲ. ಪ್ರತೀ ಚುನಾವಣೆಗಳ ಫಲಿತಾಂಶದ ನಂತರವೂ ಆರೋಪಗಳು ಕೇಳಿ ಬರುತ್ತವೆ. ಅದೇ ರೀತಿ ನಿವೃತ್ತ ಚುನಾವಣಾ ಆಯುಕ್ತರೊಬ್ಬರು ಇವಿಎಂ ದೋಷದ ಕುರಿತು ಮಾತನಾಡಿದ್ದಾರೆ ಎನ್ನಲಾದ ವಿಷಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Add Asianetnews Kannada as a Preferred SourcegooglePreferred

‘ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಿ ಬಿಜೆಪಿ ಇತ್ತೀಚೆಗೆ ನಡೆದ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದೆ’ ಎಂದು ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ ಎಸ್ ಕೃಷ್ಣಮೂರ್ತಿ ಅವರು ಹೇಳಿದ್ದಾರೆ ಎಂದು ದಿ ಡೈಲಿ ಟೆಲಿಗ್ರಾಫ್.ಕೋ.ಇನ್‌ನಲ್ಲಿ ವರದಿಯಾಗಿತ್ತು.

ವರದಿಯಲ್ಲಿ ಈ ಹಿಂದೆ ನಡೆದ ಉತ್ತರಪ್ರದೇಶ, ಉತ್ತರಾಖಂಡ ಚುನಾವಣೆ ಮತ್ತು ಇತ್ತೀಚೆಗೆ ನಡೆದ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಇವಿಎಂಗಳನ್ನು ತಿರುಚಿಯೇ ಬಿಜೆಪಿ ಗೆದ್ದಿದೆ’ ಎಂದು ಹೇಳಿದ್ದಾಗಿ ಹೇಳಿತ್ತು. ಸುದ್ದಿ ಮಾಧ್ಯಮವೊಂದರ ಈ ವರದಿಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದನ್ನು ಹಲವಾರು ಜನರು ಶೇರ್ ಕೂಡ ಮಾಡಿದ್ದರು.

ಗುಜರಾತ್, ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟವಾದ ಮೂರು ದಿನಗಳ ನಂತರ ಅಂದರೆ ಡಿಸೆಂಬರ್ 21 ರಂದು ಈ ವರದಿ ಪ್ರಕಟವಾಗಿತ್ತು. ಆದರೆ ಈ ಬಗ್ಗೆ ನಿವೃತ್ತ ಚುನಾವಣಾ ಆಯುಕ್ತ ಕೃಷ್ಣಮೂರ್ತಿ ಅವರನ್ನೇ ಆಲ್ಟ್‌ನ್ಯೂಸ್ ಸಂಪರ್ಕಿಸಿದಾಗ ಅವರು ‘ಈ ವರದಿ ಶುದ್ಧ ಸುಳ್ಳು. ನಾನು ಯಾವತ್ತೂ ವಿದ್ಯನ್ಮಾನ ಮತಯಂತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿಲ್ಲ. ಇವಿಎಂಗಳ ಬಗ್ಗೆ ನನಗೆ ನೂರಕ್ಕೆ ನೂರರಷ್ಟು ನಂಬಿಕೆ ಇದೆ. ನಾನು ಮೊದಲಿನಿಂದಲೂ ಇವಿಎಂಗಳ ಪರವಾಗಿದ್ದೇನೆ. ಯಾರೋ ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.