‘ಬಿಜೆಪಿ ಗೆಲುವು ಹಳೆ ನೋಟಿನ ಗೆಲುವೇ ಹೊರತು ನೋಟು ನಿಷೇಧಕ್ಕಲ್ಲ’
ನೋಟು ನಿಷೇಧದ ಕುರಿತು ನೀಡಿದ ಜನಾದೇಶ ಎಂದು ಬಿಜೆಪಿ ಬಿಂಬಿಸುತ್ತಿರುವ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ಠಾಕ್ರೆ, ಇದು ಹಳೆ ನೋಟಿನ ಗೆಲುವಾಗಿದೆ. ನೋಟು ನಿಷೇಧಕ್ಕೆ ಸಿಕ್ಕ ಗೆಲುವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂಬೈ(ನ.29): ಮೊದಲ ಹಂತದ ಪೌರ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಮುನ್ನೆಡೆ ಸಾಧಿಸಿರುವ ಬೆನ್ನಲ್ಲೆ , ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಆಡಳಿತರೂಢ ಬಿಜೆಪಿ ಪಕ್ಷದ ಮೇಲೆ ಹರಿಹಾಯ್ದಿದ್ದಾರೆ. ಬಿಜೆಪಿಯ ಈ ಗೆಲುವು ಹಳೆ ನೋಟಿನ ಗೆಲುವೇ ಹೊರತು, ನೋಟ್ ಬ್ಯಾನಿನ ಗೆಲುವಲ್ಲ ಎಂದು ಕಿಡಿಕಾರಿದ್ದಾರೆ.
ನೋಟು ನಿಷೇಧದ ಕುರಿತು ನೀಡಿದ ಜನಾದೇಶ ಎಂದು ಬಿಜೆಪಿ ಬಿಂಬಿಸುತ್ತಿರುವ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ಠಾಕ್ರೆ, ಇದು ಹಳೆ ನೋಟಿನ ಗೆಲುವಾಗಿದೆ. ನೋಟು ನಿಷೇಧಕ್ಕೆ ಸಿಕ್ಕ ಗೆಲುವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಚುನಾವಣೆಗೂ ಬಿಜೆಪಿ ಮಿತ್ರಪಕ್ಷ ಶಿವಸೇನೆ ಸೇರಿದಂತೆ ಮಿಕ್ಕೆಲ್ಲಾ ವಿರೋಧ ಪಕ್ಷಗಳು ನೋಟು ನಿಷೇಧವನ್ನು ವಿರೊಧಿಸಿದ್ದವು. ಬಿಜೆಪಿ ಪಕ್ಷವೊಂದೇ ಏಕ ಪಕ್ಷವಾಗಿ ಮುನ್ನಡೆ ಕಾಯ್ದುಕೊಂಡಿದ್ದರು, ವಿರೋಧ ಪಕ್ಷಗಳು ಬಹುತೇಕ ಸ್ಥಾನಗಳನ್ನು ಹಂಚಿಕೊಂಡಿವೆ.
17 ಜಿಲ್ಲಾ ಪಂಚಾಯತ್’ನ 147 ಮುನ್ಸಿಪಾಲ್ ಕ್ಷೇತ್ರಗಳ 3,705 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, 3,510 ಸ್ಥಾನಗಳ ಫಲಿತಾಂಶ ಹೊರಬಿದ್ದಿದೆ. ಮತಎಣಿಕೆ ಪ್ರಕ್ರಿಯೆ ಇನ್ನೂ ಮುಂದುವರೆದಿದೆ.
ಈ ಚುನಾವಣೆಯಲ್ಲಿ ಬಹುತೇಕ ಸ್ಥಾನಗಳನ್ನು ಬಿಜೆಪಿ ಹಾಗೂ ಶಿವಸೇನೆ ಹಂಚಿಕೊಂಡಿದೆ. ಬಿಜೆಪಿ 851 ಸ್ಥಾನಗಳನ್ನು ಗೆದ್ದುಕೊಂಡರೆ, ಶಿವಸೇನೆ 514 ಸ್ಥಾನಗಳನ್ನು ಗಳಿಸಿಕೊಂಡಿದೆ. ಇನ್ನು ಎನ್’ಸಿಪಿ(638), ಕಾಂಗ್ರೆಸ್(643), ಎಂಎನ್ಎಸ್(16), ಬಿಎಸ್ಪಿ(9), ಸ್ಥಳೀಯ ಅಭ್ಯರ್ಥಿಗಳು(384),ಸಿಪಿಎಂ(12) ಹಾಗೂ ಸ್ವತಂತ್ರ ಅಭ್ಯರ್ಥಿಗಳು 324 ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಎಂಎನ್ಎಸ್ ಈ ಚುನಾವಣೆಯನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ ಹಾಗೂ ರಾಜ್ ಠಾಕ್ರೆ ಚುನಾವಣಾ ಪ್ರಚಾರದಿಂದ ದೂರವೇ ಉಳಿದಿದ್ದರು.