ಆಪರೇಷನ್ ಕಮಲ, ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಶಾಸಕ!
ಜಾರಕಿಹೊಳಿ ಬ್ರದರ್ಸ್ ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದ್ದನ್ನೇ ದಾಳವಾಗಿ ಬಳಿಸಿಕೊಳ್ಳಲು ಮುಂದಾದ ಬಿಜೆಪಿ, ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಗುಮಾನಿಯೂ ಹಬ್ಬಿದೆ. ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್ ನಾಯಕರಲ್ಲಿ ಆಪರೇಷನ್ ಕಮಲದ ಭೀತಿ ಹುಟ್ಟಿಸಿದೆ.
ಮೈಸೂರು, (ಸೆ.16): ಬೆಳಗಾವಿ ಪಿಎಲ್ಡಿ ಬ್ಯಾಂಕ್ ಚುನಾವಣೆ ಬಳಿಕ ಜಾರಕಿಹೊಳಿ ಬ್ರದರ್ಸ್ ಮುನಿಸಿಕೊಂಡಿದ್ದು, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳಿಗೆ ಕಾರಣವಾಗಿದೆ.
ಜಾರಕಿಹೊಳಿ ಬ್ರದರ್ಸ್ ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದ್ದನ್ನೇ ದಾಳವಾಗಿ ಬಳಿಸಿಕೊಳ್ಳಲು ಮುಂದಾದ ಬಿಜೆಪಿ, ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಗುಮಾನಿಯೂ ಹಬ್ಬಿದೆ. ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್ ನಾಯಕರಲ್ಲಿ ಆಪರೇಷನ್ ಕಮಲದ ಭೀತಿ ಹುಟ್ಟಿಸಿದೆ.
ಇದಕ್ಕೆ ಪೂರಕವೆಂಬಂತೆ ಬಿಜೆಪಿಯವರು ಕಾಂಗ್ರೆಸ್ ಎಚ್.ಡಿ. ಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಅವರನ್ನ ಸೆಳೆಯಲು ಮುಂದಾಗಿದ್ದಾರೆ. ಹೀಗಂತ ಬಗ್ಗೆ ಸ್ವತಃ ಚಿಕ್ಕಮಾದು ಅವರೇ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕಮಾದು, ಬಿಜೆಪಿ ಪಕ್ಷಕ್ಕೆ ಸೇರುವಂತೆ ನನಗೆ ಆಫರ್ ಬಂದಿದ್ದು ನಿಜ, ಸಿ.ಪಿ. ಯೋಗೇಶ್ವರ್ ಅವರೇ ನನಗೆ ಆಹ್ವಾನ ನೀಡಿದ್ದರು ಎಂದು ಎಚ್.ಡಿ. ಕೋಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಆರೋಪಿಸಿದ್ದಾರೆ.
ಆಪರೇಷನ್ ಕಮಲದಲ್ಲಿ ಸಿ.ಪಿ. ಯೋಗೇಶ್ವರ್ ಸಕ್ರಿಯರಾಗಿದ್ದಾರೆ. ನಿಮ್ಮ ಕ್ಷೇತ್ರದ ಕೆಲಸ ಮಾಡಿಕೊಡುತ್ತೇವೆ ಎಂದು ಆಮಿಷವೊಡ್ಡಿದ್ದರು. ಜತೆಗೆ ಅವರು ನನಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡುವ ಆಫರ್ ನೀಡಿದ್ದರು ಎಂದು ಆರೋಪ ಮಾಡಿದರು.
ನಾನು ಕಷ್ಟದಲ್ಲಿದ್ದಾಗ ನನ್ನನ್ನು ಗುರುತಿಸಿ ಅವಕಾಶ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಹಾಗಾಗಿ ನಾನು ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಅನಿಲ್ ಚಿಕ್ಕಮಾದು ಸ್ಪಷ್ಟಪಡಿಸಿದ್ದಾರೆ.