ಬಿಜೆಪಿಯ 30 ಶಾಸಕರು ಜೆಡಿಎಸ್ಗೆ?
ಈಗಾಗಲೇ ವಿವಿಧ ಪಕ್ಷಗಳಲ್ಲಿ ಪಕ್ಷಾಂತರ ಸಂಬಂಧ ಭರ್ಜರಿ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಎನ್ನುವ ಆರೋಪ ಪ್ರತ್ಯಾರೋಪಗಳ ಬೆನ್ನಲ್ಲೇ ಇದೀಗ ಎಚ್.ಡಿ ರೇವಣ್ಣ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹಾಸನ: ಬಿಜೆಪಿಯ 30 ಶಾಸಕರು ಜೆಡಿಎಸ್ಗೆ ಬರಲು ಸಿದ್ಧರಿದ್ದಾರೆ, ಮಾಜಿ ಸಿಎಂ ಯಡಿಯೂರಪ್ಪನವರಿಗೆ ನೋವಾಗುವ ಕೆಲಸ ಮಾಡಬಾರದು ಎಂದು ಶಾಸಕರನ್ನು ಬರುವುದು ಬೇಡ ಎನ್ನುತ್ತಿದ್ದೇವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಬಿಜೆಪಿಯ 30 ಶಾಸಕರು ಜೆಡಿಎಸ್ಗೆ ಬರಲು ಸಿದ್ಧರಿದ್ದಾರೆ. ಯಡಿಯೂರಪ್ಪನವರ ಆರೋಗ್ಯದ ದೃಷ್ಟಿಯಿಂದ ಅವರ ಮನಸ್ಸಿಗೆ ನೋವು ಉಂಟು ಮಾಡಬಾರದೆಂದು ತಡೆ ಹಿಡಿಯಲಾಗಿದೆ ಎಂದ ರೇವಣ್ಣ, ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರಿಗೆ ಒಳ್ಳೇಯ ಗಿಫ್ಟ್ ಕೊಡುತ್ತೇವೆ, ಕಾದು ನೋಡಿರಿ ಎಂದು ತಿಳಿಸಿದರು.
ಈಗ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ಅವರು ರೈತರ 49 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ. ಉಳಿದ ಸಾಲವನ್ನು ಮನ್ನಾ ಮಾಡಿಲ್ಲ. ಏಕೆಂದರೆ ಬಿಜೆಪಿಯವರು ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹೇರಿ ಸಾಲ ಮನ್ನಾ ಮಾಡಿಸಿ ಹೆಸರು ಪಡೆದುಕೊಳ್ಳಲಿ ಎಂದರು.