ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೇರಿದರೆ ಪಾಕಿಸ್ತಾನಕ್ಕೆ ಒಳ್ಳೆಯದು| ಶಾಂತಿ ಮಾತುಕತೆ ನಡೆಸಲು ಉತ್ತಮ ಅವಕಾಶ| ತೀವ್ರ ಸಂಚಲನ ಮೂಡಿಸಿದೆ ಇಮ್ರಾನ್ ಖಾನ್ ಹೇಳಿಕೆ

ಇಸ್ಲಮಾಬಾದ್[ಏ.10]: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಸರ್ಕಾರ ರಚಿಸಿದರೆ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸಲು ಉತ್ತಮ ಅವಕಾಶ ಸಿಗಬಹುದು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಈ ಮೂಲಕ ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ಒಳ್ಳೆಯದೆಂದು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದೇಶೀ ಪತ್ರಕರ್ತರೊಂದಿಗೆ ಮತನಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗುರುವಾರದಿಂದ ಆರಂಭವಾಗುವ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆದ್ದರೆ ಅದು ಪಾಕಿಸ್ತಾನಕ್ಕೆ ಬಹಳ ಒಳ್ಳೆಯದು. ಉಭಯ ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆ ನಡೆಸಲು ಉತ್ತಮ ಅವಕಾಶ ಸಿಗಲಿದೆ ಹಾಗೂ ಕಾಶ್ಮೀರ ಸಮಸ್ಯೆಗೆ ಯಾವುದಾದರೊಂದು ಪರಿಹಾರ ಸಿಗುವ ಸಾಧ್ಯತೆಗಳಿವೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಎಡಪಕ್ಷಗಳ ವಿರುದ್ಧ ಮಾತನಾಡಿರುವ ಖಾನ್ 'ಒಂದು ವೇಳೆ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೇರಿದರೆ, ಅದು ಬಿಜೆಪಿಗೆ ಹೆದರಿ ಅದು ಕಾಶ್ಮೀರ ಸಮಸ್ಯೆಯನ್ನು ಪಾಕಿಸ್ತಾನದ ಜೊತೆ ಮಾತುಕತೆ ನಡೆಸಿ ಬಗೆಹರಿಸಲು ಹಿಂದೇಟು ಹಾಕಬಹುದು' ಎಂದಿದ್ದಾರೆ. 

ಮುಸಲ್ಮಾನರ ಮೇಲೆ ದಾಳಿ

ಇದೇ ಸಂದರ್ಭದಲ್ಲಿ ಮೋದಿ ಸರ್ಕಾರದ ವಿರುದ್ಧ ಆರೋಪ ಮಾಡಿರುವ ಇಮ್ತರಾನ್ ಖಾನ್ 'ಭಾರತದಲ್ಲಿ ಈಗಿನ ಪರಿಸ್ಥಿತಿಯನ್ನು ಕಂಡು ನೋವಾಗುತ್ತಿದೆ. ಮುಸಲ್ಮಾನರು ಎಂಬ ಕಾರಣದಿಂದ ಜನರ ಮೇಲೆ ಹಲ್ಲೆ ನಡೆಯುತ್ತಿದೆ. ಇಸ್ರೇಲ್ ಪ್ರಧಾನಿ ನೆತಾನ್ಯಾಹೂರಂತೆ ಮೋದಿ ಕೂಡಾ 'ಭಯ ಹಾಗೂ ರಾಷ್ಟ್ರೀಯತೆ'ಯನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕಾಶ್ಮೀರಕ್ಕೆ ದಶಕಗಳ ಹಿಂದೆ ನೀಡಲಾದ ವಿಶೇಷ ಅಧಿಕಾರವನ್ನು ಹಿಂಪಡೆಯುವ ಮಾತುಗಳನ್ನಾಡಿದ್ದಾರೆ. ಇದೊಂದು ಚಿಂತಾಜನಕ ವಿಚಾರ. ಆದರೆ ಇದು ಕೇವಲ ಚುನಾವಣೆಗಾಗಿ ಹೇಳಿದ ಮಾತುಗಳಾಗಿರಬಹುದು' ಎಂದಿದ್ದಾರೆ.

ಭಯೋತ್ಪಾದನೆ ವಿಚಾರವಾಗಿ ಮಾತನಾಡಿದ ಇಮ್ರಾನ್ ಖಾನ್ 'ನಾವು ದೇಶದಲ್ಲಿರುವ ಎಲ್ಲಾ ಭಯೋತ್ಪಾದಕರನ್ನು ಮಟ್ಟ ಹಾಕಲು ಧೃಡ ನಿರ್ಧಾರ ಕೈಗೊಂಡಿದ್ದೇವೆ. ಇದಕ್ಕೆ ಸರ್ಕಾರ ಪಾಕ್ ಸೈನ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತದೆ' ಎಂದಿದ್ದಾರೆ.