ಸರಗಳ್ಳತನ ಬಗ್ಗೆ ಗೊತ್ತಿದ್ದರೂ ಸಹ ಪತಿಗೆ ಅಪರಾಧ ಕೃತ್ಯಕ್ಕೆ ಪ್ರಚೋದನೆ ನೀಡಿದ ಹಾಗೂ ಕಳವು ವಸ್ತುಗಳ ವಿಲೇವಾರಿಗೆ ಅಚ್ಯುತ್‌ಗೆ ಸಹಕರಿಸಿದ ಆರೋಪದ ಮೇರೆಗೆ ಮಹಾದೇವಿಯನ್ನು ಬಂಧಿಸಲಾಗಿದೆ.

ಬೆಂಗಳೂರು[ಸೆ.19]: ನಾಲ್ಕು ತಿಂಗಳ ಹಿಂದೆ ಗುಂಡಿನ ದಾಳಿ ನಡೆಸಿ ಪೊಲೀಸರು ಸೆರೆಹಿಡಿದಿದ್ದ ‘ಶತಕ ವೀರ’ ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್‌ನ ಪತ್ನಿ ಸಹ ಈಗ ಪತಿಗೆ ಆಶ್ರಯ ನೀಡಿದ ತಪ್ಪಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪರಾಧ ಮಾಡುವುದು ಮಾತ್ರವಲ್ಲ ಅದಕ್ಕೆ ಕುಮ್ಮಕ್ಕು ಕೊಡುವುದು ಸಹ ಅಪರಾಧವಾಗುತ್ತದೆ. ಇತ್ತೀಚಿಗೆ ಸರಗಳ್ಳತನ ಪ್ರಕರಣದಲ್ಲಿ ಬಂಧಿಸಲಾಗಿದ್ದ ಅಚ್ಯುತ್ ವಿರುದ್ಧ ತನಿಖೆ ವೇಳೆ ಆತನ ಪತ್ನಿ ಮಹಾದೇವಿ ಪಾತ್ರ ಸಹ ಕಂಡು ಬಂದಿತು. ಸರಗಳ್ಳತನ ಬಗ್ಗೆ ಗೊತ್ತಿದ್ದರೂ ಸಹ ಪತಿಗೆ ಅಪರಾಧ ಕೃತ್ಯಕ್ಕೆ ಪ್ರಚೋದನೆ ನೀಡಿದ ಹಾಗೂ ಕಳವು ವಸ್ತುಗಳ ವಿಲೇವಾರಿಗೆ ಅಚ್ಯುತ್‌ಗೆ ಸಹಕರಿಸಿದ ಆರೋಪದ ಮೇರೆಗೆ ಮಹಾದೇವಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಲಭ್ಯವಾಗಬಹುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.

ಜೂ.19ರಂದು ಜ್ಞಾನಭಾರತಿ ಬಳಿ ಸರಗಳ್ಳತನ ಯತ್ನಿಸಿ ಪರಾರಿಯಾಗುವಾಗ ಅಚ್ಯುತ್ ಮೇಲೆ ಗುಂಡಿನ ದಾಳಿ ನಡೆಸಿ ಪಶ್ಚಿಮ ವಿಭಾಗದ ಪೊಲೀಸರು ಸೆರೆ ಹಿಡಿದಿದ್ದರು. ಈತನ ವಿರುದ್ಧ ಬೆಂಗಳೂರು ಮಾತ್ರವಲ್ಲದೆ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ 100ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಸರಗಳ್ಳತನ ಕೃತ್ಯದಲ್ಲಿ ಪತಿಗೆ ಸಾಥ್ ನೀಡಿದ ಆತನ ಪತ್ನಿಯನ್ನು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ.