ಕುಡಿದು ಕಾರು ಚಲಾಯಿಸಿ ಅಪಘಾತ
ಕುಡಿದು ಒನ್ವೇನಲ್ಲಿ ಕಾರು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿರುವ ಘಟನೆ ತಡರಾತ್ರಿ ಬೆಂಗಳೂರಿನ ಹನುಮಂತನಗರದ ನಿರ್ಮಲಾ ಸ್ಟೋರ್ಸ್ ಬಳಿ ನಡೆದಿದೆ.
ಬೆಂಗಳೂರು : ಕುಡಿದು ಒನ್ವೇನಲ್ಲಿ ಕಾರು ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿರುವ ಘಟನೆ ತಡರಾತ್ರಿ ಬೆಂಗಳೂರಿನ ಹನುಮಂತನಗರದ ನಿರ್ಮಲಾ ಸ್ಟೋರ್ಸ್ ಬಳಿ ನಡೆದಿದೆ.
ಡಿಕ್ಕಿಯಾದ ರಭಸಕ್ಕೆ ಒಂದು ಸ್ವಿಫ್ಟ್ ಡಿಸೈರ್ ಕಾರು ಮತ್ತೊಂದು ಗೂಡ್ಸ್ ಗಾಡಿ ಜಖಂ ಆಗಿವೆ. ಚಾಲಕ ಅಭಿಷೇಕ್ ಎಂಬಾತ ತಡರಾತ್ರಿ 1 ಗಂಟೆ ಹೊತ್ತಿಗೆ ಕುಡಿದು ತನ್ನ ಇನ್ನೋವಾ ಕಾರಿನಲ್ಲಿ ಹನುಮಂತನಗರದಿಂದ ನಿರ್ಮಲ ಸ್ಟೋರ್ಸ್ ಕಡೆಗೆ ಒನ್ವೇನಲ್ಲಿ ವೇಗವಾಗಿ ಬಂದಿದ್ದು, ಈ ವೇಳೆ ಎದುರಿನಿಂದ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.
ನಂತರ ಮತ್ತೊಂದು ಗೂಡ್ಸ್ ಆಟೋಗೂ ಡಿಕ್ಕಿ ಹೊಡೆಸಿ ಬಳಿಕ ರಸ್ತೆ ಬದಿಯ ಕಾಂಪೌಂಡ್ ಒಂದಕ್ಕೆ ಗುದ್ದಿದ್ದಾನೆ. ಆದರೆ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಘಟನೆ ನಡೆದ ಬಳಿಕ ಸ್ಥಳೀಯರು ಇನ್ನೋವಾ ಚಾಲಕ ಅಭಿಷೇಕ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಸ್ವಿಫ್ಟ್ ಡಿಸೈರ್ ವಾಹನದಲ್ಲಿದ್ದ ಮೂವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಬಗ್ಗೆ ಬಸವನಗುಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.