'ಟಿಎಂಸಿ ಮುಖಂಡರನ್ನು ಎನ್ಕೌಂಟರ್ ಮಾಡಿ'..!
ಟಿಎಂಸಿ ಮುಖಂಡರನ್ನು ಎನ್ಕೌಂಟರ್ ಮಾಡಿ
ಪ.ಬಂಗಾಳ ಬಿಜೆಪಿ ಅಧ್ಯಕ್ಷ ವಿವಾದಾತ್ಮಕ ಹೇಳಿಕೆ
ಎನ್ ಕೌಂಟರ್ ಮಾಡುವಂತೆ ಕರೆ ನೀಡಿದ ದೀಲಿಪ್ ಘೋಷ್
ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕಿದರೆ ಹುಷಾರ್
ಕೋಲ್ಕತಾ(ಜೂ.20): ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಟಿಎಂಸಿ ಪಕ್ಷದ ವಿರುದ್ದ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕುವ ಟಿಎಂಸಿ ಮುಖಂಡರನ್ನು ಮತ್ತು ಅವರ ಬೆಂಬಲಿಗರನ್ನು ಎನ್ಕೌಂಟರ್ ಮಾಡಬೇಕು ಎಂದು ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರ ಬಂಗಾಳದ ಜಲ್ಪೈಗುರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಘೋಷ್, ಬಹಳಷ್ಟು ಟಿಎಂಸಿ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರೆ. ಒಂದು ಅವರು ಜೈಲಿಗೆ ಹೋಗುತ್ತಾರೆ ಇಲ್ಲವೆ ಎನ್ಕೌಂಟರ್ ನಲ್ಲಿ ಸಾಯುತ್ತಾರೆ ಎಂದು ಎಚ್ಚರಿಸಿದ್ದಾರೆ.
'ಅವರು ನಮ್ಮ ಮೇಲೆ ದಾಳಿ ಮಾಡಿದರೂ ನಾವು ಅವರಿಗೆ ರಸಗುಲ್ಲ ನೀಡುತ್ತೇವೆ ಎಂದು ಟಿಎಂಸಿಗೆ ಬಾಂಡ್ ಬರೆದುಕೊಟ್ಟಿಲ್ಲ. ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸದಂತೆ ಎಚ್ಚರಿಕೆ ನೀಡುತ್ತಿದ್ದೇನೆ. ಆದಾಗ್ಯೂ ಮತ್ತೆ ದಾಳಿ ನಡೆಸಿದರೆ ಗುಂಡಿನ ಉತ್ತರ ನೀಡಬೇಕಾಗುತ್ತದೆ' ಎಂದು ಘೋಷ್ ಹೇಳಿದ್ದಾರೆ.
ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಘೋಷ್ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇತ್ತೀಚಿಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆ ವೇಳೆಯೂ ಘೋಷ್, ಟಿಎಂಸಿ ಕಾರ್ಯಕರ್ತರ ಮಕ್ಕಳು ಅನಾಥರಾಗುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.