ಸೀರೆ ಧರಿಸಿ, ಮಾಂಸಾಹಾರ ತ್ಯಜಿಸಿ, ಕೇಕ್ ಕಟ್ ಮಾಡ್ಬೇಡಿ, ಕ್ರಿಕೆಟ್ ಬಗ್ಗೆ ಮಾತಾಡ್ಬೇಡಿ : ಆರೆಸ್ಸೆಸ್ ಸಲಹೆ
ಭಾರತೀಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕುಟುಂಬ ಸಮಾಲೋಚನೆ ಅಭಿಯಾನವನ್ನು ನಡೆಸುತ್ತಿದ್ದು, ಜನರಿಗೆ ಭಾರತೀಯ ಉಡುಗೆಯನ್ನು ತೊಡುವ ಹಾಗೂ ಮಾಂಸಾಹಾರವನ್ನು ತ್ಯಜಿಸುವ ಬಗ್ಗೆ ಜಾಗೃತಿ ಉಂಟುಮಾಡುತ್ತಿದೆ.
ನಾಗಪುರ: ಭಾರತೀಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕುಟುಂಬ ಸಮಾಲೋಚನೆ ಅಭಿಯಾನವನ್ನು ನಡೆಸುತ್ತಿದ್ದು, ಜನರಿಗೆ ಭಾರತೀಯ ಉಡುಗೆಯನ್ನು ತೊಡುವ ಹಾಗೂ ಮಾಂಸಾಹಾರವನ್ನು ತ್ಯಜಿಸುವ ಬಗ್ಗೆ ಜಾಗೃತಿ ಉಂಟುಮಾಡುತ್ತಿದೆ.
ಕಳೆದ ಏಪ್ರಿಲ್’ನಲ್ಲಿ ಈ ಅಭಿಯಾನವು ಆರಂಭವಾಗಿದ್ದು, 2019ರ ಸಾರ್ವತ್ರಿಕ ಚುನಾವಣೆವರೆಗೆ ನಡೆಯಲಿದೆಯೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಈ ಅಭಿಯಾನದ ಸಂದರ್ಭದಲ್ಲಿ ನೀತಿ ಹಾಗೂ ಮೌಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಉಂಟುಮಾಡಲು ಮನೆ-ಮನೆಗೆ ಸ್ವಯಂಸೇವಕರು ತಂಡದ ರೂಪದಲ್ಲಿ ಭೇಟಿ ನೀಡುತ್ತಿದ್ದು, ಏನನ್ನು ತಿನ್ನಬೇಕು, ತೊಡಬೇಕು ಎಂಬುದರ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸೇವಿಕಾ ಸಂಘ (ಆರೆಸ್ಸೆಸ್’ನ ಮಹಿಳಾ ವಿಭಾಗ) ಕೂಡಾ ಈ ಅಭಿಯಾನದಲ್ಲಿ ಕೈಜೋಡಿಸಿದ್ದು, ಸಸ್ಯಹಾರದ ಪ್ರಯೋಜನಗಳು ಹಾಗೂ ಭಾರತೀಯ ಉಡುಗೆಯಾದ ಸೀರೆಯನ್ನು ಧರಿಸುವಂತೆ ಜಾಗೃತಿಯನ್ನುಂಟುಮಾಡುತ್ತಿದೆ.
ಮನೆಗೆ ಭೇಟಿ ನೀಡಿ ಕುಟುಂಬದ ಆಚಾರ-ವಿಚಾರಗಳನ್ನು ತಿಳಿದು, ವಿದೇಶಿ ಸಂಸ್ಕೃತಿಯನ್ನು ತ್ಯಜಿಸುವಂತೆ ಜನರಿಗೆ ಹೇಳಲಾಗುತ್ತಿದೆಯೆಂದು ವರದಿಯು ಹೇಳಿದೆ.
ಊಟ ಮಾಡುವ ಮುಂಚೆ ಹಿಂದೂ ಸಂಪ್ರದಾಯದಂತೆ ಮಂತ್ರಗಳನ್ನು ಉಚ್ಚರಿಸುವ ಕ್ರಮವನ್ನು ಅಭ್ಯಾಸ ಮಾಡಿಕೊಳ್ಳಬೇಕು, ಹುಟ್ಟುಹಬ್ಬಕ್ಕೆ ಭಾರತೀಯ ಸಂಸ್ಕೃತಿಯಲ್ಲದ ಕ್ಯಾಂಡಲ್ ಆರಿಸುವ ಅಥವಾ ಕೇಕ್ ಕಟ್ ಮಾಡುವುದನ್ನು ವರ್ಜಿಸಬೇಕು, ಕುಟುಂಬದ ಜತೆಗಿರುವಾಗ ರಾಜಕೀಯ ಅಥವಾ ಕ್ರಿಕೆಟನ್ನು ಚರ್ಚಿಸಬಾರದು ಎಂದು ಆರೆಸ್ಸೆಸ್ ಮಂದಿ ಸಲಹೆ ಮಾಡಿದ್ದಾರೆಂದು ವರದಿ ಹೇಳಿದೆ.