ಇನ್ಮುಂದೆ ಆರೋಗ್ಯದ ಚಿಂತೆ ಬೇಡ; ಬರಲಿದೆ ಆಯುಷ್ಮಾನ್ ಭಾರತ
ದೇಶದ 50 ಕೋಟಿ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ‘ಆಯುಷ್ಮಾನ್ ಭಾರತ’ (ಮೋದಿ ಕೇರ್) ಯೋಜನೆ ಸೆಪ್ಟೆಂಬರ್ 25 ರಂದು ದೇಶಾದ್ಯಂತ ಜಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ
ಮೋದಿ ಘೋಷಿಸಿದ್ದಾರೆ.
ನವದೆಹಲಿ (ಆ. 16): ದೇಶದ 50 ಕೋಟಿ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ‘ಆಯುಷ್ಮಾನ್ ಭಾರತ’ (ಮೋದಿ ಕೇರ್) ಯೋಜನೆ ಸೆಪ್ಟೆಂಬರ್ 25 ರಂದು ದೇಶಾದ್ಯಂತ ಜಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
‘ಸೆಪ್ಟೆಂಬರ್ 25 ಜನಸಂಘದ ಸ್ಥಾಪಕ ಪಂ. ದೀನದಯಾಳ ಉಪಾಧ್ಯಾಯರ ಜನ್ಮದಿವಸ ಆಚರಣೆ ನಡೆಯಲಿದೆ. ಅಂದು ದೇಶಾದ್ಯಂತ ಈ ಯೋಜನೆ ಜಾರಿಯಾಗಲಿದೆ. ಬಡವರು ಆರೋಗ್ಯ ತೊಂದರೆಯಿಂದ ಬಳಲಬಾರದು. ಆತ ಇದಕ್ಕಾಗಿ ಖರ್ಚು ಮಾಡಬಾರದು ಎಂಬ ಉದ್ದೇಶದಿಂದ ಯೋಜನೆ ಜಾರಿಗೊಳಿಸುತ್ತಿದ್ದೇವೆ’ ಎಂದು ಹೇಳಿದರು.
ಈಗಾಗಲೇ ಯೋಜನೆಯ ಜಾರಿಗೆ ಸಿದ್ಧತೆ ನಡೆಯುತ್ತಿದೆ. ಇನ್ನು 4-5 ವಾರದಲ್ಲಿ ಪ್ರಾಯೋಗಿಕವಾಗಿ ಕೆಲವು ಕಡೆ ಯೋಜನೆಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಬಳಿಕ ಸಂಪೂರ್ಣ ಸಿದ್ಧತೆ ಮಾಡಿಕೊಂಡು ಯಾವುದೇ ಲೋಪದೋಷಗಳಿಲ್ಲದಂತೆ ದೇಶಾದ್ಯಂತ ಯೋಜನೆ ಜಾರಿಗೆ ತರಲಾಗುತ್ತದೆ ಎಂದರು. ಇದು ವಿಶ್ವದ ಬೃಹತ್ ಆರೋಗ್ಯ ಯೋಜನೆ ಎನ್ನಿಸಿಕೊಳ್ಳಲಿದೆ. ಇಡೀ ಅಮೆರಿಕ, ಕೆನಡಾ ಹಾಗೂ ಯುರೋಪ್ ಒಟ್ಟುಗೂಡಿ ಎಷ್ಟು ಜನಸಂಖ್ಯೆಯಾಗುತ್ತದೋ ಅಷ್ಟು ಜನಸಂಖ್ಯೆಯು ಭಾರತವೊಂದರಲ್ಲೇ ಆಯುಷ್ಮಾನ್ ಭಾರತದ ಪ್ರಯೋಜನ ಪಡೆಯಲಿದೆ ಎಂದು ಪ್ರಧಾನಿ ಹೇಳಿದರು.
ಏನಿದು ಯೋಜನೆ?:
ಆಯುಷ್ಮಾನ್ ಭಾರತ (ಮೋದಿ ಕೇರ್ ಎಂದು ಯೋಜನೆ ಖ್ಯಾತಿ ಪಡೆದಿದೆ) ಪ್ರತಿಯೊಬ್ಬರಿಗೆ ವಾರ್ಷಿಕ 5 ಲಕ್ಷ ರು. ವಿಮಾ ಸೌಲಭ್ಯ ಒದಗಿಸುತ್ತದೆ. ಸುಮಾರು 10 ಕೋಟಿ ಬಡ ಕುಟುಂಬಗಳು (ನಗರದಲ್ಲಿ ೮.೦೩ ಕೋಟಿ, ಗ್ರಾಮೀಣದಲ್ಲಿ ೨.೩೩ ಕೋಟಿ ಕುಟುಂಬಗಳು) ಯೋಜನೆಯ ಲಾಭ ಪಡೆಯಲಿವೆ. ಒಟ್ಟಾರೆ 50 ಕೋಟಿ ಜನರಿಗೆ ಯೋಜನೆಯ ಪ್ರಯೋಜನ ಲಭಿಸಲಿದೆ. ಆದರೆ ಕರ್ನಾಟಕ, ಕೇರಳ,\ ಪಂಜಾಬ್, ಮಹಾರಾಷ್ಟ್ರ, ದಿಲ್ಲಿ ಯೋಜನೆಗೆ ಇನ್ನೂ ಒಪ್ಪಿಗೆ ನೀಡಿಲ್ಲ. ಒಡಿಶಾ ಈಗಾಗಲೇ ಈ ಯೋಜನೆಯನ್ನು ತಿರಸ್ಕರಿಸಿದೆ. ಆದರೆ 22 ರಾಜ್ಯಗಳು ಯೋಜನೆಯ ಪ್ರಾಯೋಗಿಕ ಜಾರಿಗೆ ಮುಂದಾಗಿದೆ.