ವಿರೋಧದ ನಡುವೆಯೂ ಸ್ಕ್ರೀನಿಂಗ್ ಕಮಿಟಿಗೆ ಅಶೋಕ್ ಖೇಣಿ
ನೈಸ್ ಅಕ್ರಮದಲ್ಲಿ ಹೆಸರು ಕೇಳಿ ಬಂದಿದ್ದರೂ, ಅಶೋಕ್ ಖೇಣಿಯನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡಿರುವ ಬಗ್ಗೆ ಪಕ್ಷದಲ್ಲಿಯೇ ತೀವ್ರ ಅಸಮಾಧಾನ ಭುಗಿಲೆದ್ದಿತು. ಅದರಲ್ಲಿಯೂ ಮಾಜಿ ಮುಖ್ಯಮಂತ್ರಿ ಡಿ.ಧರ್ಮ್ ಸಿಂಗ್ ಕುಟುಂಬದಲ್ಲಿಯಂತೂ ಆಕ್ರೋಶ ಹೆಚ್ಚಾಗಿತ್ತು. ಆದರೆ, ಇದೀಗ ಇದೇ ಖೇಣಿಯನ್ನು ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿಗೆ ಆಯ್ಕೆ ಮಾಡಲಾಗಿದೆ.
ಬೆಂಗಳೂರು (ಮಾ.26): ನೈಸ್ ಅಕ್ರಮದಲ್ಲಿ ಹೆಸರು ಕೇಳಿ ಬಂದಿದ್ದರೂ, ಅಶೋಕ್ ಖೇಣಿಯನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಂಡಿರುವ ಬಗ್ಗೆ ಪಕ್ಷದಲ್ಲಿಯೇ ತೀವ್ರ ಅಸಮಾಧಾನ ಭುಗಿಲೆದ್ದಿತು. ಅದರಲ್ಲಿಯೂ ಮಾಜಿ ಮುಖ್ಯಮಂತ್ರಿ ಡಿ.ಧರ್ಮ್ ಸಿಂಗ್ ಕುಟುಂಬದಲ್ಲಿಯಂತೂ ಆಕ್ರೋಶ ಹೆಚ್ಚಾಗಿತ್ತು. ಆದರೆ, ಇದೀಗ ಇದೇ ಖೇಣಿಯನ್ನು ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿಗೆ ಆಯ್ಕೆ ಮಾಡಲಾಗಿದೆ.
ಡಾ. ಜಿ. ಪರಮೇಶ್ವರ್ ಶಿಫಾರಸ್ಸು ಮೇರೆಗೆ ಅಶೋಕ್ ಖೇಣಿ ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಲು ನಿರ್ಧಾರ ಮಾಡಲಾಗಿದೆ. ಖೇಣಿ ಸೇರ್ಪಡೆಗೆ ಬೀದರ್ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಧರಂಸಿಂಗ್ ಕುಟುಂಬದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಖರ್ಗೆ ವಿರೋಧದ ನಡುವೆಯೂ ಖೇಣಿ ಹೆಸರು ಶಿಫಾರಸು ಮಾಡಲು ಇಂದಿನ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಮಾರ್ಚ್ 28 ರಂದು ಸಿಎಂ ಮತ್ತು ನಾನು ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರೊಂದಿಗೆ ಚರ್ಚೆ ಮಾಡುತ್ತೇವೆ. ನಾಳೆ ಸ್ಕ್ರಿನಿಂಗ್ ಕಮಿಟಿ ಅಧ್ಯಕ್ಷರಾದ ಮಿಸ್ತ್ರಿ ಅವರು ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಏಪ್ರಿಲ್ 15 ರ ಒಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಮಾಡ್ತೇವೆ. ಏಪ್ರಿಲ್ 9, 10 ರಂದು ಸ್ಕ್ರಿನಿಂಗ್ ಕಮಿಟಿ ಸಭೆ ನಡೆಯಲಿದೆ. 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಒಟ್ಟಿಗೆ ಘೋಷಣೆ ಮಾಡುತ್ತೇವೆ. 15 ರ ಒಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಎಲ್ಲಾ ಹಾಲಿ ಶಾಸಕರನ್ನು ಪಟ್ಟಿಯಲ್ಲಿ ಸೇರಿಸಿದ್ದೇವೆ. ಟಿಕೆಟ್ ಕೊಡಬಹುದು ಎಂದು ಶಿಫಾರಸು ಮಾಡಿದ್ದೇವೆ. ಅಂತಿಮವಾಗಿ ಸ್ಕ್ರಿನಿಂಗ್ ಕಮಿಟಿ, ಹಾಗೂ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಹರ್ಷ ಮೊಯ್ಲಿ ಅವರ ಹೆಸರನ್ನ ಹಿಂಪಡೆದ ಚುನಾವಣಾ ಸಮಿತಿ ನಡೆ ಬಗ್ಗೆ ಜಿ ಪರಮೇಶ್ವರ್ ಹೇಳಿದ್ದಾರೆ. ಹರ್ಷ ಮೊಯ್ಲಿ ಅವರು ಕಾರ್ಕಳ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಅವರ ಹೆಸರನ್ನ ಶಿಫಾರಸು ಮಾಡಲಾಗಿತ್ತು. ಇದೀಗ ಮೊಯ್ಲಿ ಅವರೇ ಅವರ ಹೆಸರನ್ನ ಟಿಕೆಟ್’ಗಾಗಿ ಶಿಫಾರಸು ಮಾಡಬೇಡಿ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಹರ್ಷ ಮೊಯ್ಲಿ ಹೆಸರನ್ನ ವಾಪಸ್ ಪಡೆದಿದ್ದೇವೆ. ಹರ್ಷ ಮೊಯ್ಲಿ ಅವರಿಗೆ ನೋಟಿಸ್’ಗೆ ಉತ್ತರ ಕೊಡುವಂತೆ ಸೂಚಿಸಿದ್ದೇವೆ. ಎರಡು ದಿನಗಳೊಳಗೆ ಉತ್ತರ ಕೊಡಲಿದ್ದಾರೆ. ಈ ಬಗ್ಗೆ ಮೊಯ್ಲಿ ಅವರೊಂದಿಗೂ ಇಂದು ಮಾತಾಡಿದ್ದೇವೆ ಎಂದಿದ್ದಾರೆ.
ಸಿ ವೋಟರ್ ಸಮೀಕ್ಷೆ ವಿಚಾರವನ್ನು ಪ್ರಸ್ತಾಪಿಸುತ್ತಾ, ನಮ್ಮ ವರದಿಗಳು, ಸಿ ವೋಟರ್ ಸಮೀಕ್ಷೆಗಳು ಹತ್ತಿರ ಇವೆ. ಸಮೀಕ್ಷೆ ಏನೇ ಬರಲಿ. ನಾವು ಗೆಲುವು ಸಾಧಿಸ್ತೇವೆ ಎಂಬ ವಿಶ್ವಾಸವಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.