ದೆಹಲಿಯಲ್ಲಿ ಮತ್ತೆ ಸಮ-ಬೆಸ ಆಟ ಎಂದ ಕೇಜ್ರಿ: ಹುಡುಗಾಟ ಬೇಕಿಲ್ಲ ಎಂದ ಗಡ್ಕರಿ!
ವಾಯುಮಾಲಿನ್ಯ ನಿಯಂತ್ರಣಕ್ಕೆ ಮತ್ತೆ ಸಮ-ಬೆಸ ಯೋಜನೆಗೆ ಮುಂದಾದ ಕೇಜ್ರಿ| ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಪಾಯದ ಮಟ್ಟ ತಲುಪಿದ ವಾಯಮಾಲಿನ್ಯ| ಸಮ-ಬೆಸ ಯೋಜನೆಯೊಂದೇ ಪರಿಹಾರ ಎಂದ ದೆಹಲಿ ಸಿಎಂ| ಕೇಜ್ರಿವಾಲ್ ನಿರ್ಧಾರಕ್ಕೆ ಕೊಕ್ಕೆ ಹಾಕಿದ ಕೇಂದ್ರ ಸಾರಿಗೆ ಸಚಿವ| ದೆಹಲಿಗೆ ಸಮ-ಬೆಸ ಯೋಜನೆ ಬೇಕಿಲ್ಲ ಎಂದ ನಿತಿನ್ ಗಡ್ಕರಿ| ಹೊಸ ರಿಂಗ್ ರೋಡ್ನಿಂದ ವಾಯಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ ಎಂದ ಗಡ್ಕರಿ|
ನವದೆಹಲಿ(ಸೆ.13): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ, ಮತ್ತೆ ಸಮ-ಬೆಸ ಸಂಖ್ಯೆ ವಾಹನ ಚಾಲನೆ ಯೋಜನೆ ಜಾರಿಗೆ ತರುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
ವಾಯುಮಾಲಿನ್ಯ ನಿಯಂತ್ರಣಕ್ಕೆ 7 ಅಂಶಗಳ ಕ್ರೀಯಾ ಯೋಜನೆಗೆ ದೆಹಲಿ ಸರ್ಕಾರ ಮುಂದಾಗಿದ್ದು, ಮತ್ತೆ ಸಮ-ಬೆಸ ಯೋಜನೆ ಜಾರಿಗೆ ಉತ್ಸುಕತೆ ತೋರಿದೆ. ಮುಂಬರುವ 4-15 ನವೆಂಬರ್ ಅವಧಿಗಾಗಿ ಸಮ-ಬೆಸ ಯೋಜನೆ ಜಾರಿಗೊಳಿಸುವುದಾಗಿ ಕೇಜ್ರಿ ಘೋಷಿಸಿದ್ದಾರೆ.
ಇಡೀ ದೇಶದಲ್ಲಿ ದೆಹಲಿಯೊಂದೇ ವಾಯುಮಾಲಿನ್ಯ ಪರಿಶೀಲನೆ ನಡೆಸುತ್ತಿದ್ದು, ವಾಯುಮಾಲಿನ್ಯ ತಡೆಗಟ್ಟಲು ಇದೊಂದೇ ಮಾರ್ಗ ಎಂದು ದೆಹಲಿ ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಕೇಜ್ರಿ ಯೋಜನೆಗೆ ಕೊಕ್ಕೆ ಹಾಕಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ದೆಹಲಿಗೆ ಸಮ-ಬೆಸ ಯೋಜನೆ ಬೇಕಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ದೆಹಲಿಯಲ್ಲಿ ನಿರ್ಮಾಣವಾಗಿರುವ ಹೊಸ ರಿಂಗ್ ರೋಡ್ ವಾಯುಮಾಲಿನ್ಯ ಸಮಸ್ಯೆಗೆ ಇತಿಶ್ರೀ ಹಾಡಲಿದ್ದು, ಮುಂಬರುವ ಮೂರು ವರ್ಷಗಳಲ್ಲಿ ದೆಹಲಿ ವಾಯುಮಾಲಿನ್ಯ ಸಮಸ್ಯೆಯಿಂದ ಮುಕ್ತವಾಗಲಿದೆ ಎಂದು ಗಡ್ಕರಿ ಭರವಸೆ ವ್ಯಕ್ತಪಡಿಸಿದ್ದಾರೆ.