ಪ್ರಧಾನಿ ಮೋದಿ ಅವರು ಕೈಗೊಂಡಿ­ರುವ ನಿರ್ಧಾರವನ್ನು ಅತ್ಯಂತ ದಿಟ್ಟಎಂದು ಬಣ್ಣಿಸಿದ ವಿತ್ತ ಸಚಿವ ಅರುಣ್‌ ಜೇಟ್ಲಿ, ಈ ಕ್ರಮದಿಂದ ಸಮಾಜದ ಸರ್ವಜನರಿಗೂ ಅನುಕೂಲವಾಗಲಿದೆ, ಎಲ್ಲ ವರ್ಗವೂ ಈ ಕ್ರಮವನ್ನು ಸ್ವಾಗತಿಸಬೇಕು ಎಂದಿದ್ದಾರೆ.
ನವದೆಹಲಿ: ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳುವಾಗ ಎಲ್ಲಾ ತೆರಿಗೆ ಕಾನೂನುಗಳೂ ಅನ್ವಯವಾಗುತ್ತವೆ, ಇದು ತೆರಿಗೆಗಳ್ಳರಿಗೆ ಕ್ಷಮಾದಾನ ಯೋಜನೆ ಅಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಜತೆಗೆ, ಕಪ್ಪು ಹಣ ನಿಯಂತ್ರಣ ಮತ್ತು ಆರ್ಥಿಕ ಭಯೋತ್ಪಾದನೆ ನಿಗ್ರಹಕ್ಕಾಗಿ 500 ಮತ್ತು 1000 ರೂ. ನೋಟುಗಳನ್ನು ರದ್ದುಮಾಡುವ ಕ್ರಮದಿಂದ ಆರ್ಥಿಕತೆ ದೃಢಗೊಳ್ಳಲಿದ್ದು, ಜಾಗತಿಕ ಮಟ್ಟದಲ್ಲಿ ರಾಷ್ಟ್ರದ ವಿಶ್ವಾಸಾರ್ಹತೆ ವೃದ್ಧಿಸಲಿದೆ ಎಂದೂ ಹೇಳಿದ್ದಾರೆ.
ಈ ನಡುವೆ ನೋಟು ಬದಲಾಯಿಸಿಕೊಡುವ ಸಲುವಾಗಿ ಎಲ್ಲಾ ಬ್ಯಾಂಕುಗಳು ಶನಿವಾರ ಮತ್ತು ಭಾನುವಾರ ದಿನವಿಡೀ ಕಾರ್ಯನಿರ್ವಹಿಸಲಿವೆ. ಹಳೆ ನೋಟು ನೀಡಿ ಹೊಸ ನೋಟು ಬದಲಾಯಿಸಿಕೊಳ್ಳುವ ಪ್ರಕ್ರಿಯೆಯನ್ನು ಸರಳ ಮತ್ತು ಸುಸೂತ್ರಗೊಳಿಸಲು ಆರ್ಬಿಐ ಬ್ಯಾಂಕುಗಳಿಗೆ ಸೂಚನೆ ನೀಡಿದೆ.
ಆದಾಯ ಘೋಷಣೆಯಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಾದ ಹಣಕ್ಕೆ ಶೇ.200 ರಷ್ಟುದಂಡ ವಿಧಿಸಲಾಗುತ್ತದೆ ಎಂದು ಕೇಂದ್ರ ಎಚ್ಚರಿಸಿದೆ. ಇದು ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ದಿಟ್ಟಕ್ರಮ ಎಂದೇ ಭಾವಿಸಲಾಗಿದೆ.
ಇದೇ ವೇಳೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನವೆಂಬರ್ 11ರವರೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ರದ್ದು ಮಾಡಲಾಗಿದೆ. ತೆರಿಗೆ ವಿನಾಯ್ತಿ ಮಿತಿ ವ್ಯಾಪ್ತಿಗೆ ಬರುವ ರೈತರು, ಗೃಹಿಣಿಯರು, ಕಾರ್ಮಿಕರು .2.50 ಲಕ್ಷ ಮೌಲ್ಯದ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಕೈಗೊಂಡಿರುವ ನಿರ್ಧಾರವನ್ನು ಅತ್ಯಂತ ದಿಟ್ಟಎಂದು ಬಣ್ಣಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ, ಈ ಕ್ರಮದಿಂದ ಸಮಾಜದ ಸರ್ವಜನರಿಗೂ ಅನುಕೂಲವಾಗಲಿದೆ, ಎಲ್ಲ ವರ್ಗವೂ ಈ ಕ್ರಮವನ್ನು ಸ್ವಾಗತಿಸಬೇಕು ಎಂದಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮತಾನಾಡಿದ ಅವರು, ದೇಶದ ಆರ್ಥಿಕತೆಯನ್ನು ಉತ್ತೇಜಿಸಲು ಎರಡೂವರೆ ವರ್ಷದಲ್ಲಿ ಸರ್ಕಾರ ಹಲವು ಕ್ರಮಕೈಗೊಂಡಿದೆ. ಜನರು ತಮ್ಮ ಕಪ್ಪುಹಣವನ್ನು ಘೋಷಿಸಿಕೊಂಡು ಅದನ್ನು ಅಧಿಕೃತಗೊಳಿಸಿಕೊಳ್ಳಲು ಕಪ್ಪು ಹಣ ಕಾಯ್ದೆಯನ್ನು ರೂಪಿಸಿದ್ದೇವೆ ಎಂದರು.
ನಮ್ಮ ನಿರ್ಧಾರದಿಂದ ಕಪ್ಪುಹಣದ ಪರ್ಯಾಯ ಆರ್ಥಿಕತೆಗೆ ಹಿನ್ನಡೆಯಾಗಲಿದೆ, ಏಕೆಂದರೆ ವ್ಯವಸ್ಥೆಯ ಹೊರಗಿರುವ ನಗದು ಈಗ ನೇರವಾಗಿ ಬ್ಯಾಂಕಿಂಗ್ ವ್ಯವಸ್ಥೆಗೆ ಬರಲಿದೆ. ನಾಗರಿಕರಿಗೆ ಕೆಲವು ಅನನುಕೂಲಗಳಾಗುತ್ತವೆ. ಇವುಗಳನ್ನು ತಪ್ಪಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳುತ್ತಿದೆ. ಪರಿಸ್ಥಿತಿ ಮೇಲೆ ನಿಗಾ ಇಟ್ಟಿದೆ. ಕೆಲವು ಪ್ರಕರಣಗಳಲ್ಲಿ ಪ್ರಧಾನಿ 72 ಗಂಟೆಗಳ ಅವಧಿ ವರಿಗೆ ನೋಟು ಸ್ವೀಕರಿಸಲು ಅವಕಾಶ ನೀಡಿದ್ದಾರೆ. ಪರಿಸ್ಥಿತಿಯನ್ನು ನಾವು ಅವಲೋಕಿಸುತ್ತಿದ್ದೇವೆæ. ಮೆಟ್ರೋ, ಔಷಧ ಅಂಗಡಿ ಮತ್ತಿತರ ಕಡೆಗಳಲ್ಲಿ .500, .1000 ನೋಟುಗಳನ್ನು ಸ್ವೀಕರಿಸಲಾಗಿದೆ ಎಂದರು. ಈ ನಿರ್ಧಾರದಿಂದ ಕೇಂದ್ರಸರ್ಕಾರವಷ್ಟೇ ಅಲ್ಲ ರಾಜ್ಯಸರ್ಕಾರಗಳೂ ಅನುಕೂಲ ಪಡೆಯಲಿವೆ ಎಂದರು. ಸುಧಾರಣಾ ಕ್ರಮಗಳಿಂದ ಬಡವರಿಗೆ ಅನನುಕೂಲವಾಗುವುದಿಲ್ಲ, ಪ್ರಮಾಣಿಕವಾಗಿ ತೆರಿಗೆ ಪಾವತಿಸುವವರಲ್ಲಿ ನಮ್ಮ ನಿರ್ಧಾರದಿಂದ ತೃಪ್ತಭಾವ ಬಂದಿದೆ ಎಂದರು.
(ಕೃಪೆ: ಕನ್ನಡಪ್ರಭ)
