ಆಂಧ್ರ ಸಿಎಂ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ; ಬೀಳುತ್ತಾ ಸರ್ಕಾರ?
ಹಳೆಯ ಪ್ರಕರಣವೊಂದರ ಸಂಬಂಧ ಇದೀಗ ಕೋರ್ಟ್ ಸಿಎಂ ಸೇರಿ 14ಮಂದಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ. ಇದರಿಂದ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡುಗೆ ಸಂಕಷ್ಟ ಎದುರಾದಂತಾಗಿದೆ.
ಮುಂಬೈ : ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಮಹಾರಾಷ್ಟ್ರದ ಕೋರ್ಟ್ ಒಂದು ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
8 ವರ್ಷಗಳ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಾರೆಂಟ್ ಜಾರಿಯಾಗಿದೆ. ಬಬ್ಲಿ ಪ್ರಾಜೆಕ್ಟ್ ವಿಚಾರವಾಗಿ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಧರ್ಮಬಾದ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆಂಧ್ರ ಪ್ರದೇಶ ಸಿಎಂ ಹಾಗೂ ಸಚಿವ ಡಿ ಉಮಾಮಹೇಶ್ವರ್ ರಾವ್ ಸೇರಿದಂತೆ ಒಟ್ಟು 14 ಮಂದಿ ವಿರುದ್ಧ ವಾರೆಂಟ್ ಜಾರಿ ಮಾಡಿದೆ.
ಸೆಪ್ಟೆಂಬರ್ 21ರ ಒಳಗೆ ಬಂಧಿಸಿ ಕೋರ್ಟ್ ಗೆ ಹಾಜರುಪಡಿಸುವಂತೆ ವಾರೆಂಟ್ ನಲ್ಲಿ ತಿಳಿಸಲಾಗಿದೆ.
2010ರಲ್ಲಿ ಮಹಾರಾಷ್ಟ್ರ ಸರ್ಕಾರವು ಗೋದಾವರಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡಲು ನಿರ್ಧರಿಸಿತ್ತು. ಇದನ್ನು ವಿರೋಧಿಸಿ ಟಿಡಿಪಿ ಭಾರೀ ಪ್ರತಿಭಟನೆಯನ್ನು ನಡೆಸಿತ್ತು.
ಈ ವೇಳೆ ಟಿಡಿಪಿಯ 40ಕ್ಕೂ ಅಧಿಕ ಮುಖಂಡರು ಮಹಾರಾಷ್ಟ್ರ ಪ್ರವೇಶಿಸಿ ಪ್ರತಿಭಟನೆಯ ಮೂಲಕ ಬಬ್ಲಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ನಾಯ್ಡು ಸೇರಿದಂತೆ ಹಲವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು.
ಇದೀಗ ಈ ಹಳೆಯ ಪ್ರಕರಣಕ್ಕೆ ಮರುಜೀವ ಬಂದಿದ್ದು, ಬಂಧನ ವಾರೆಂಟ್ ಜಾರಿ ಮಾಡಲಾಗಿದೆ.