‘ನಿಮ್ಮ ಬಾಯಿಂದ ಬಂದ ಮಾತು ಕಸಕ್ಕಿಂತ ಕೀಳು'..!
ಕಸ ಚೆಲ್ಲಿ ಅನುಷ್ಕಾ ಸಿಟ್ಟಿಗೆ ಗುರಿಯಾಗಿದ್ದ ಯುವಕ
ನಡೆದ ಘಟನೆ ಕುರಿತು ವಿವರಣೆ ನೀಡಿದ ಅರ್ಹಾನ್
ನಿಮ್ಮ ಪ್ರಚಾರದ ಹುಚ್ಚಿಗೆ ನನ್ನನ್ನೇಕೆ ಬಲಿ ಮಾಡುತ್ತೀರಿ?
ಫೇಸ್ಬುಕ್ ನಲ್ಲಿ ಇಡೀ ಕತೆ ವಿವರಿಸಿದ ಅರ್ಹಾನ್
ಮುಂಬೈ(ಜೂ.17): ರಸ್ತೆಯಲ್ಲಿ ಕಸ ಎಸೆದಿದ್ದಕ್ಕೆ ನಟಿ ಅನುಷ್ಕಾ ಶರ್ಮಾ ಅವರಿಂದ ಸ್ವಚ್ಛತೆಯ ಪಾಠ ಹೇಳಿಸಿಕೊಂಡಿದ್ದ ಯುವಕ, ಇದೀಗ ಅವರಿಗೆ ಭಾರೀ ತಿರುಗೇಟು ನೀಡಿದ್ದಾರೆ.
ನಡೆದ ಘಟನೆಗೆ ಕ್ಷಮೆ ಕೇಳಿದ್ದರೂ ಕೂಡ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅನುಷ್ಕಾ ಮತ್ತವರ ಪತಿ ವಿರಾಟ್ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಅರ್ಹಾನ್ ಸಿಂಗ್ ಆರೋಪಿಸಿದ್ದಾರೆ.
ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಅರ್ಹಾನ್ , ತಾನು ಕಾರಿನಲ್ಲಿ ಹೋಗುತ್ತಿರುವಾಗ ಒಂದು ತುಂಡು ಪ್ಲಾಸ್ಟಿಕ್ ಕಸ ಕಾರಿನಿಂದ ಹೊರಗೆ ಹಾರಿತು. ಆಗ ಅನುಷ್ಕಾ ಶರ್ಮ ಇದ್ದಕ್ಕಿಂದಂತೆ ರೇಗಾಡತೊಡಗಿದರು ಎಂದು ಅರ್ಹಾನ್ ಹೇಳಿದ್ದಾರೆ. ಕೂಡಲೇ ತಾವು ಕ್ಷಮೆ ಕೇಳಿ ಕಾರಿನಿಂದ ಇಳಿದು ಕಸವನ್ನು ತೆಗೆದು ಹಾಕಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಕಸವನ್ನು ತಾನು ಬೇಕೆಂದೇ ಎಸೆದಿರಲಿಲ್ಲ. ಆದರೆ ಸೆಲೆಬ್ರಿಟಿಯಾಗಿ ಅನುಷ್ಕಾ ಶರ್ಮ ಬಾಯಿಂದ ಬಂದ ಮಾತು ಕಸಕ್ಕಿಂತ ಕಡೆಯಾಗಿತ್ತು. ನಿಮ್ಮ ದುಬಾರಿ ಕಾರಿನಲ್ಲಿ ಕುಳಿತುಕೊಂಡು ಸೆಲೆಬ್ರಿಟಿಯಾಗಿ ನೀವು ವಿಡಿಯೊ ಮಾಡಿ ಅಪ್ಲೋಡ್ ಮಾಡಿದ್ದರ ಹಿಂದಿನ ಉದ್ದೇಶವೇನು ಎಂದು ಅರ್ಹಾನ್ ಸಿಂಗ್ ಕೇಳಿದ್ದಾರೆ.