ಮತ್ತೊಂದು ಸರ್ಜಿಕಲ್ ದಾಳಿಗೆ ಸಿದ್ಧತೆ?
ರಜೌರಿ ವಲಯದಲ್ಲಿ ಭಾನುವಾರ ಪಾಕಿಸ್ತಾನ ನಡೆಸಿದ ಶೆಲ್ ಮತ್ತು ಗುಂಡಿನ ದಾಳಿಗೆ ತನ್ನ ನಾಲ್ವರು ಯೋಧರು ಬಲಿಯಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಸೇನೆ, ಇದಕ್ಕೆ ನಾವು ಸೂಕ್ತ ಪ್ರತ್ಯುತ್ತರ ನೀಡಲಿದ್ದೇವೆ ಎಂದು ಎಚ್ಚರಿಸಿದೆ.
ನವದೆಹಲಿ (ಫೆ.06): ರಜೌರಿ ವಲಯದಲ್ಲಿ ಭಾನುವಾರ ಪಾಕಿಸ್ತಾನ ನಡೆಸಿದ ಶೆಲ್ ಮತ್ತು ಗುಂಡಿನ ದಾಳಿಗೆ ತನ್ನ ನಾಲ್ವರು ಯೋಧರು ಬಲಿಯಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತೀಯ ಸೇನೆ, ಇದಕ್ಕೆ ನಾವು ಸೂಕ್ತ ಪ್ರತ್ಯುತ್ತರ ನೀಡಲಿದ್ದೇವೆ ಎಂದು ಎಚ್ಚರಿಸಿದೆ.
ನಾವು ಏನು ಮಾಡುತ್ತೇವೆ ಎಂಬುದನ್ನು ಹೇಳೋದಿಲ್ಲ, ನಮ್ಮ ಗನ್ಗಳು ಮಾತನಾಡುತ್ತವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಈ ಕುರಿತು ಇಲ್ಲಿ ಪ್ರತಿಕ್ರಿಯೆ ನೀಡಿರುವ ಸೇನೆಯ ಉಪಮುಖ್ಯಸ್ಥ ಶರತ್ ಚಂದ್, ‘ಇದು ನೇರಾನೇರ ಯುದ್ಧ ಮತ್ತು ದಾಳಿ. ಇದಕ್ಕೆ ಯಾವ ರೀತಿ ಉತ್ತರಿಸಬೇಕೋ ಹಾಗೆಯೇ ನಾವು ಉತ್ತರ ನೀಡಲಿದ್ದೇವೆ.
ನಾವು ಏನು ಮಾಡುತ್ತೇವೆ ಎಂದು ಹೇಳಲಾಗದು’ ಎಂದು ಹೇಳಿದ್ದಾರೆ. ಈ ಮೂಲಕ ಮತ್ತೊಂದು ಸರ್ಜಿಕಲ್ ದಾಳಿಯ ಮಾದರಿಯ ಸಮರಕ್ಕೆ ಭಾರತ
ಸಜ್ಜಾಗುತ್ತಿರ ಬಹುದು ಎಂಬ ಸುಳಿವು ನೀಡಿದ್ದಾರೆ. ಈ ನಡುವೆ ಭಾನುವಾರದ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್, ಸೇನೆಯ ಮೇಲೆ ಭಾರತೀಯರಿಗೆ ಪೂರ್ಣ ನಂಬಿಕೆ ಇದೆ. ಪಾಕ್ ದಾಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಎನ್ನುವುದು ಭಾರತೀಯ ಸೇನೆಗೆ ಗೊತ್ತಿದೆ. ಅವರು ಅದರಂತೆಯೇ ನಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಭಾನುವಾರ ಪಾಕ್ ನಡೆಸಿದ ದಾಳಿಯಲ್ಲಿ ಕ್ಯಾಪ್ಟನ್ ಕಪಿಲ್ ಕುಂಡು, ರಾಮವತಾರ್, ಶುಭಂ ಸಿಂಗ್ ಮತ್ತು ರೋಶನ್ ಲಾಲ್ ಸಾವನ್ನಪ್ಪಿದ್ದರು. ಅಲ್ಲದೆ ಇತರೆ ಹಲವು ನಾಗರಿಕರು ಗಾಯಗೊಂಡಿದ್ದರು.