ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆ ಬಿಟ್ಟರೆ ರಾಜ್ಯದಲ್ಲಿ ಮತ್ಯಾರಿಗೂ ಕನ್ನಡ ಸರಿಯಾಗಿ ಬರಲ್ಲ, ಯೋಗ್ಯತೆಯೂ ಇಲ್ಲ
ಇಂಗ್ಲಿಷ್ ಅನ್ನು ಶುದ್ಧ ಕನ್ನಡಕ್ಕೆ ಭಾಷಾಂತರ ಮಾಡುವುದೇ ಇಂದು ಸವಾಲು
ಮಂಗಳೂರು(ಫೆ.17): ವಿವಾದಗಳಿಂದಲೇ ಪ್ರಸಿದ್ಧರಾಗಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೆ ಸುದ್ದಿಯಾಗಿದ್ದಾರೆ.
'ನಾನು ಶುದ್ಧ ಕನ್ನಡದಲ್ಲಿ ಮಾತನಾಡಿದ್ರೆ ಯಾರಿಗೂ ಅರ್ಥವಾಗಲ್ಲ.ಅದರಲ್ಲೂ ಬೆಂಗಳೂರಿಗರಿಗೆ ಶುದ್ಧ ಕನ್ನಡ ಅರ್ಥವಾಗುವುದೇ ಇಲ್ಲ. ಇತ್ತೀಚೆಗೆ ಕನ್ನಡ ಬರೆಯಲು ಯಾರಿಗೂ ಬರುತ್ತಿಲ್ಲ. ಇಂಗ್ಲಿಷ್ ಅನ್ನು ಶುದ್ಧ ಕನ್ನಡಕ್ಕೆ ಭಾಷಾಂತರ ಮಾಡುವುದೇ ಇಂದು ಸವಾಲು. ಕರ್ನಾಟಕದಲ್ಲಿ ಶುದ್ಧ ಕನ್ನಡ ಯಾರಲ್ಲೂ ಇಲ್ಲ. ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡದ ಹಳ್ಳಿಗರನ್ನು ಹೊರತುಪಡಿಸಿ ಕನ್ನಡ ಯಾರಿಗೂ ಬರುತ್ತಿಲ್ಲ'ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಯೋಜನೆ ಅಡಿಯಲ್ಲಿ ಆರಂಭಿಸಲಾದ ಉಚಿತ ತಾಂತ್ರಿಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಮೂರು ಜಿಲ್ಲೆಗಳನ್ನು ಹೊರತುಪಡಿಸಿದರೆ ಕನ್ನಡದ ಯೋಗ್ಯತೆಯೇ ಯಾರಿಗೂ ಇಲ್ಲ' ಎಂದರು.