ದೇಶದ ಸಂವಿಧಾನಕ್ಕೆ ಹೆಗಡೆಯಿಂದ ಅವಮಾನ: ವೇಣುಗೋಪಾಲ್
- ರಾಜಕೀಯ, ಸಂವಿಧಾನದ ಭಾಷೆ ಗೊತ್ತಿಲ್ಲವೆಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧೆ ಎಲ್ಲೆಡೆಯಿಂದ ತೀವ್ರ ಆಕ್ರೋಶ.
- ಸಂವಿಧಾನ ವಿರೋಧಿ ಹೇಳಿಕೆ ಹಿಂಪಡೆಯಲು ಬಿಜೆಪಿ ಸಚಿವನಿಗೆ ಕಾಂಗ್ರೆಸ್ ಒತ್ತಡ.
- ಸಂವಿಧಾನ ಬದಲಾಯಿಸುತ್ತೇವೆ ಎಂದ ಅನಂತಕುಮಾರ್ ಹೆಗಡೆ.
ಬೆಂಗಳೂರು: 'ಸಂವಿಧಾನ ಬದಲಿಸುತ್ತೇವೆ,' ಎಂದು ಕೇಂದ್ರ ಸಚಿವ, ಬಿಜೆಪಿಯ 'ಫೈರ್ಬ್ರಾಂಡ್' ಎಂದೇ ಹೆಸರಾದ ಅನಂತ್ಕುಮಾರ್ ಹೆಗಡೆ ನೀಡಿರುವ ಹೇಳಿಕೆಗೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಸಹ 'ದೇಶದ ಸಂವಿಧಾನಕ್ಕೆ ಅವರು ಅವಮಾನ ಮಾಡಿದ್ದಾರೆ,' ಎಂದು ಆರೋಪಿಸಿದ್ದಾರೆ.
'ರಾಷ್ಟ್ರ ಜಾತ್ಯಾತೀತ ತತ್ವವನ್ನು ಅನಂತಕುಮಾರ್ ಅವಮಾನಿಸಿದ್ದಾರೆ. ಸಮಾಜವನ್ನು ಒಡೆಯಲು ಬಿಜೆಪಿ ಅವರನ್ನು ಸಚಿವರನ್ನಾಗಿಸಿದೆ,' ಎಂದು ವೇಣುಗೋಪಾಲ್ 'ಸುವಣ್ಣ ನ್ಯೂಸ್'ನೊಂದಿಗೆ ಮಾತನಾಡಿ ಆರೋಪಿಸಿದ್ದಾರೆ.
'ಇಂಥ ಹೇಳಿಕೆಗಳ ಮೂಲಕ ಸಮಾಜ ಒಡೆಯುವ ಕೆಲಸವನ್ನು ಸಚಿವರು ಮಾಡ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇಂಥವರಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿಯೇ ಸಚಿವರ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕು. ಪ್ರಮಾಣ ವಚನ ಸ್ವೀಕರಿಸಿದ್ದರ ವಿರುದ್ಧವಾಗಿ ಅನಂತಕುಮಾರ ಹೆಗಡೆ ನಡೆದುಕೊಳ್ಳುತ್ತಿದ್ದಾರೆ,' ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ.
'ಜಾತ್ಯತೀತ ತತ್ವವನ್ನು ಪಾಲಿಸುವವರೇ ಮೂರ್ಖರು ಅನ್ನೋ ಅರ್ಥದಲ್ಲಿ ಕೇಂದ್ರ ಸಚಿವರು ಹೇಳಿಕೆ ನೀಡಿದ್ದಾರೆ. ಅವರು ಬಳಸಿದ ಪದಗಳನ್ನ ಬೇರೆಯವರು ಬಳಸಲಾಗದಂತೆ ಹೇಳಿಕೆಯನ್ನು ನೀಡಿದ್ದಾರೆ,' ಎಂದು ಕಾಂಗ್ರೆಸ್ ಉಸ್ತುವಾರಿ ಹೇಳಿದ್ದಾರೆ.