ಆರ್'ಎಸ್'ಎಸ್ ಮುಖಂಡರ ಸಭೆಯಲ್ಲಿ ಯಡಿಯೂರಪ್ಪಗೆ ಅಮಿತ್ ಶಾ ಕ್ಲಾಸ್
ಅಮಿತ್ ಶಾ ಸೂಚನೆಯಂತೆ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ ಐಟಿ ದಾಳಿಗೊಳಗಾಗಿರುವ ಸಚಿವರ ರಾಜೀನಾಮೆಗಾಗಿ ಹೋರಾಟ ಕೈಗೊಳ್ಳುವುದಾಗಿ ಹೇಳಿದರು.
ಬೆಂಗಳೂರು(ಆ.14): ಮೂರು ದಿನಗಳ ರಾಜ್ಯ ಪ್ರವಾಸದ ಕೊನೆಯ ದಿನದಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಒಂದಷ್ಟು ಕಿವಿ ಮಾತು ಹೇಳಿದ್ದಾರೆ. ಆರ್ ಎಸ್ ಎಸ್ ಜೊತೆ ಸಮನ್ವಯತೆ ಸೇರಿ ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯಬೇಕೆಂಬ ಸಂದೇಶ ರವಾನೆಯಾಗಿದ್ದು, ರಾಜ್ಯ ಸರ್ಕಾರದ ವಿರುದ್ದ ಹೋರಾಟ ತೀವ್ರಗೊಳಿಸಲು ಸೂಚನೆ ಸಿಕ್ಕಿದೆ.
ರಾಜಕೀಯ ರಣತಂತ್ರ ರೂಪಿಸುವಲ್ಲಿ ನಿಸ್ಸೀಮನಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಣ್ಣು ಕರ್ನಾಟಕದ ಮೇಲೆ ಬಿದ್ದಿದೆ. ಮೂರು ದಿನಗಳ ರಾಜ್ಯ ಪ್ರವಾಸದ ಕೊನೆಯ ದಿನವಾದ ಇಂದು ಅಮಿತ್ ಶಾ, ಯಡಿಯೂರಪ್ಪನವರನ್ನು ಜೊತೆಯಲ್ಲಿ ಇಟ್ಟುಕೊಂಡೇ ಆರ್ ಎಸ್ ಎಸ್ ಮುಖಂಡರ ಜೊತೆ ಸಭೆ ನಡೆಸಿದರು. ಈ ವೇಳೆ ಯಡಿಯೂರಪ್ಪಗೆ ಕೆಲ ಸಲಹೆ ನೀಡಿದರು.
ಅಮಿತ್ ಷಾ ಬಿ'ಎಸ್'ವೈ'ಗೆ ಕೇಳಿದ ಪ್ರಶ್ನೆಗಳು
*ಐಟಿ ದಾಳಿ ವಿಚಾರ ಬಗ್ಗೆ ಬಿಜೆಪಿ ದೊಡ್ಡ ಮಟ್ಟದ ಹೋರಾಟ ಮಾಡಬೇಕು
*ಡಿ.ಕೆ.ಶಿವಕುಮಾರ್ ಐಟಿ ದಾಳಿಗಿಂತ ಬಿಜೆಪಿಗೆ ದೊಡ್ಡ ಅಸ್ತ್ರ ಬೇಕಾ?
*ನಿಮ್ಮ ಸ್ನೇಹ ಏನೇ ಇರಲಿ, ರಾಜಕಾರಣದಲ್ಲಿ ಮಾತ್ರ ಪಕ್ಕಾ ವೃತ್ತಿಪರವಾಗಿರಿ
*ಸಭೆಯಲ್ಲಿ ಯಡಿಯೂರಪ್ಪಗೆ ನೇರವಾಗಿ ಹೇಳಿದ ಅಮಿತ್ ಶಾ
*ಡಿಕೆಶಿ ಮನೆ ಮೇಲಿನ ಐಟಿ ದಾಳಿ ವಿಚಾರದಲ್ಲಿ ಹೋರಾಟ ನಡೆಸಬೇಕು
*ಡಿ.ಕೆ.ಶಿವಕುಮಾರ್ ಮನೆ ಸೇರಿ 62 ಕಡೆ ಐಟಿ ದಾಳಿ ನಡೆದಿದೆ
ತಕ್ಷಣವೇ ಹೋರಾಟ ರೂಪಿಸಿ ಕಾರ್ಯೋ ನ್ಮುಖರಾಗುವಂತೆ ನಿರ್ದೇಶನ ಕೊಟ್ಟಿದ್ದಾರೆ. ಜೊತೆಗೆ ಪಕ್ಷದೊಳಗಿನ ಮತ್ತು ಆರ್ ಎಸ್ ಎಸ್ ಜೊತೆಗಿನ ಶೀತಲ ಸಮರವನ್ನು ಮುಗಿಸಿ ಸಂಘಟನೆಯತ್ತ ಗಮನ ಹರಿಸುವಂತೆ ಕಿವಿ ಮಾತು ಹೇಳಿದ್ದಾರೆ. .ಅಮಿತ್ ಶಾ ಸೂಚನೆಯಂತೆ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ ಐಟಿ ದಾಳಿಗೊಳಗಾಗಿರುವ ಸಚಿವರ ರಾಜೀನಾಮೆಗಾಗಿ ಹೋರಾಟ ಕೈಗೊಳ್ಳುವುದಾಗಿ ಹೇಳಿದರು.
ಒಟ್ಟಾರೆ ಮೂರು ದಿನಗಳ ಅವಧಿಯಲ್ಲಿ ರಾಜ್ಯ ಬಿಜೆಪಿ ನಿರೀಕ್ಷೆ ಯಷ್ಟು ಚುರುಕಾಗಿಲ್ಲ ಎಂಬುದನ್ನು ಅಮಿತ್ ಶಾ ಮನಗಂಡಿದ್ದಾರೆ. ಹಾಗಾಗಿಯೇ ತಮ್ಮದೇ ಆದ ಶೈಲಿಯಲ್ಲಿ ರಾಜ್ಯ ನಾಯಕರಿಗೆ ಹೇಳಬೇಕಾಗಿರುವುದನ್ನು ಹೇಳಬೇಕಾದ ರೀತಿಯಲ್ಲಿಯೇ ಹೇಳಿ ದೆಹಲಿ ವಿಮಾನ ಹತ್ತಿದ್ದಾರೆ.
- ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್