Asianet Suvarna News Asianet Suvarna News

ಎಚ್‌ಡಿಕೆ ಸರ್ಕಾರವನ್ನು ಉಳಿಸೋದಾ? ಬೀಳಿಸೋದಾ? ಅಮಿತ್ ಶಾಗೆ ಗೊಂದಲವಂತೆ!

ಎಚ್‌ಡಿಕೆ ಸರ್ಕಾರವನ್ನು ಉರುಳಿಸೋದಾ? ಉಳಿಸೋದಾ? ಗೊಂದಲದಲ್ಲಿದ್ದಾರೆ ಅಮಿತ್ ಶಾ | ಕಾಂಗ್ರೆಸ್ ನಾಯಕರನ್ನು ಸೆಳೆಯುವಲ್ಲಿ ಯಶಸ್ವಿಯಾಗ್ತಾರಾ ಅಮಿತ್ ಶಾ? 

Amit Shah tries to woo congress leaders
Author
Bengaluru, First Published Sep 11, 2018, 9:34 AM IST

ನವದೆಹಲಿ (ಸೆ. 11): 2014 ರಲ್ಲಿ ದಿಲ್ಲಿಯಲ್ಲಿ ಅಧಿಕಾರ ಹಿಡಿದ ನಂತರ ಸಿಕ್ಕ ಸಿಕ್ಕ ರಾಜ್ಯಗಳಲ್ಲೆಲ್ಲ ಅಧಿಕಾರವನ್ನು ಗಟ್ಟಿ ಕೈಯಿಂದ ಬಾಚಿಕೊಂಡ ಅಮಿತ್ ಶಾ ಕರ್ನಾಟಕದ ವಿಷಯದಲ್ಲಿ ಮಾತ್ರ ಕುಮಾರಸ್ವಾಮಿ ಸರ್ಕಾರವನ್ನು ಉಳಿಸೋಣವೋ ಬೀಳಿಸೋಣವೋ ಎಂಬ ದ್ವಂದ್ವದಲ್ಲಿದ್ದಾರೆ.

ಕಳೆದ ಕೆಲ ದಿನಗಳಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕುಮಾರಸ್ವಾಮಿ ಸರ್ಕಾರವನ್ನು ಉರುಳಿಸಲು ಅಗತ್ಯವಾಗಿರುವ 18 ಶಾಸಕರನ್ನು ಸೆಳೆಯಲು ಸಾಧ್ಯವೇ ಎಂದು ಪರಿಶೀಲಿಸಲು ತಮ್ಮ ಅನೇಕ ನಂಬಿಕಸ್ತ ‘ಲೆಫ್ಟಿನೆಂಟ್’ಗಳನ್ನು ಕರ್ನಾಟಕಕ್ಕೆ ನಿಯೋಜಿಸಿದ್ದರೂ, ಇಲ್ಲಿಯವರೆಗೆ ಸರ್ಕಾರವನ್ನು ಬೀಳಿಸುವ ಬಗ್ಗೆ ಯಾವುದೇ ನಿರ್ಣಯಕ್ಕೆ ಬರಲು ಅಮಿತ್ ಶಾಗೆ ಸಾಧ್ಯವಾಗಿಲ್ಲ.

ಒಮ್ಮೆ ಬೀಳಿಸಲು ಹೋಗಿ ಅದು ಕಾನೂನಿನ ಆಟದಲ್ಲಿ ಬೀಳದೆ ಬರೀ ದೇಶದಾದ್ಯಂತ ಕೆಟ್ಟ ಹೆಸರು ಮಾತ್ರ ತಂದರೆ ಎಂಬ ಆತಂಕವೂ ದಿಲ್ಲಿ ನಾಯಕರಿಗಿದೆ. 

ತರಾತುರಿಯಲ್ಲಿ ಬಿಎಸ್‌ವೈ

ಆದರೆ ಕುಮಾರಸ್ವಾಮಿ ಸರ್ಕಾರವನ್ನು ಹೇಗಾದರೂ ಮಾಡಿ ಲೋಕಸಭೆ ಚುನಾವಣೆಗಿಂತ ಮೊದಲು ಬೀಳಿಸಿದರೆ ಮಾತ್ರ ತಮಗೆ ಮುಖ್ಯಮಂತ್ರಿ ಪದವಿ ಒಲಿಯುತ್ತದೆ ಎಂದು ಮನವರಿಕೆ ಆಗಿರುವ ಯಡಿಯೂರಪ್ಪ ಮಾತ್ರ ಒಂದು ಕಡೆ ಕಾಂಗ್ರೆಸ್ ಶಾಸಕರು ಮತ್ತು ಇನ್ನೊಂದು ಕಡೆ ದಿಲ್ಲಿ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ.

ಅಕ್ಟೋಬರ್‌ಗಿಂತ ಮೊದಲು ಸರ್ಕಾರ ಬೀಳಿಸಿದರೆ ಲೋಕಸಭೆಯಲ್ಲಿ 20 ಕ್ಕಿಂತ ಹೆಚ್ಚು ಸೀಟ್ ಗೆಲ್ಲಬಹುದು ಎಂದು ಅಮಿತ್ ಶಾ ಎದುರು ನೇರವಾಗಿಯೇ ಹೇಳಿಬಂದಿರುವ ಬಿಎಸ್‌ವೈ, ಕೆಲ ಕಾಂಗ್ರೆಸ್ ಶಾಸಕರ ಜೊತೆ ಸಂಪರ್ಕದಲ್ಲೂ ಇದ್ದಾರೆ. ಆದರೂ ಆ ಸಂಖ್ಯೆ 6 ರಿಂದ 7 ದಾಟಿದ ಬಗ್ಗೆ ಖಾತ್ರಿಯಿಲ್ಲದ ಕಾರಣ ಹೈಕಮಾಂಡ್ ಇನ್ನೂ ಯಾವುದೇ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

ಯಡಿಯೂರಪ್ಪ ಲೆಕ್ಕ ಹಾಕಿರುವ ಪ್ರಕಾರ ದಿಲ್ಲಿಯಲ್ಲಿ 2019 ರಲ್ಲಿ ಮೋದಿ ಸೋತರೂ ಗೆದ್ದರೂ ಅವರಿಗೆ (ಯಡಿಯೂರಪ್ಪಗೆ) ಚುನಾವಣೆ ನಂತರ ಈಗಿನಷ್ಟು ರಾಜಕೀಯ ಪ್ರಾಮುಖ್ಯತೆ ಇರುವುದಿಲ್ಲ. ಏನಿದ್ದರೂ ಈಗಲೇ ಆಗಬೇಕು ಎಂಬುದು ಅವರಿಗೆ ಗೊತ್ತು. ಹೀಗಾಗಿಯೇ ಎಂದಿನಂತೆ ರಾಜಕೀಯ ಲಾಬಿಗಳಲ್ಲಿ ಜೋರಾಗಿ ಓಡಾಡಲು ಆರಂಭಿಸಿದ್ದಾರೆ.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

Follow Us:
Download App:
  • android
  • ios