ಕೇಜ್ರಿಗೆ ಕೆಲ್ಸ ಮಾಡಲು ಬಿಡಿ: ಶಿವಸೇನೆ ಆಗ್ರಹ!
ದೆಹಲಿ ಸರ್ಕಾರಕ್ಕೆ ಕೆಲಸ ಮಾಡಲು ಬಿಡಿ
ಕೇಂದ್ರ ಸರ್ಕಾರಕ್ಕೆ ಶಿವಸೇನೆ ಆಗ್ರಹ
ಸುಪ್ರೀಂ ಕೋರ್ಟ್ ಆದೇಶದಂತೆ ನಡೆಯಿರಿ
ಕೇಂದ್ರದ ಮೇಲೆ ಚಾಟಿ ಬೀಸಿದ ಶಿವಸೇನೆ
ಮುಂಬೈ(ಜು.6): ಕೇಂದ್ರ ಸರ್ಕಾರ ದೆಹಲಿ ಆಮ್ ಆದ್ಮಿ ಪಕ್ಷದ ಸರ್ಕಾರದೊಂದಿಗೆ ಸಹಕರಿಸಬೇಕು ಮತ್ತು ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು. ಕೇಂದ್ರ ಸರ್ಕಾರದ ಅನವಶ್ಯಕ ಮಧ್ಯಸ್ಥಿಕೆ ಸುಪ್ರೀಂ ಕೋರ್ಟ್ ನ ಆದೇಶ ಉಲ್ಲಂಘಿಸಿದಂತಾಗುತ್ತದೆ ಎಂದು ಶಿವಸೇನೆ ಎಚ್ಚರಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಕೇಜ್ರಿವಾಲ್ ಪರವಾಗಿ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಶಿವಸೇನೆ ಈ ಹೇಳಿಕೆ ನೀಡಿದೆ. ಮನಸ್ಸು ಮಾಡಿದ್ದರೆ ಪ್ರಧಾನಿ ನರೇಂದ್ರ ಮೋದಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ನಿಯಂತ್ರಿಸಬಹುದಾಗಿತ್ತು. ಆದರೆ ಅವರು ಹಾಗೆ ಮಾಡದಿದ್ದುದು ದುರದೃಷ್ಟಕರ ಎಂದು ಶಿವಸೇನೆ ಟೀಕಿಸಿದೆ.
ಕನಿಷ್ಠ ಪಕ್ಷ ಈಗಲಾದರೂ ಹಗ್ಗಜಗ್ಗಾಟಕ್ಕೆ ತೆರೆ ಎಳೆದು ಕೇಜ್ರಿವಾಲ್ ಅವರಿಗೆ ಕೆಲಸ ಮಾಡಲು ಬಿಡಿ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಆಗ್ರಹಿಸಿದೆ.ನಿನ್ನೆಯಷ್ಟೇ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ಚುನಾಯಿತ ಸರ್ಕಾರದ ಸಲಹೆಗಳಿಗೆ ಬದ್ಧವಾಗಿರಬೇಕು ಮತ್ತು ಚುನಾಯಿತ ಸರ್ಕಾರದ ಪ್ರತಿರೋಧಿಯಾಗಿ ನಡೆದುಕೊಳ್ಳುವಂತಿಲ್ಲ ಎಂದು ತೀರ್ಪು ನೀಡಿತ್ತು.