ವಿಮಾನ ಚರಂಡಿಗೆ ಬಿದ್ದಿದ್ದಕ್ಕೆ ಪೈಲಟ್ ‘ಏಜ್ಗ್ಯಾಪ್’ ಕಾರಣ!
18 ತಿಂಗಳ ಹಿಂದೆ ಕೊಚ್ಚಿಯ ಚರಂಡಿಯೊಂದರಲ್ಲಿ ಏರ್ ಇಂಡಿಯಾ ವಿಮಾನ ಲ್ಯಾಂಡ್| ವಿಮಾನ ಚರಂಡಿಗೆ ಬಿದ್ದಿದ್ದಕ್ಕೆ ಪೈಲಟ್ ‘ಏಜ್ಗ್ಯಾಪ್’ ಕಾರಣ
ನವದೆಹಲಿ[ಮೇ.11]: 18 ತಿಂಗಳ ಹಿಂದೆ ಕೊಚ್ಚಿ ವಿಮಾನದ ಚರಂಡಿಯೊಂದರಲ್ಲಿ ಏರ್ ಇಂಡಿಯಾ ವಿಮಾನ ಲ್ಯಾಂಡ್ ಆಗಿದ್ದಕ್ಕೆ ಪೈಲಟ್ಗಳ ನಡುವಣ ‘ವಯೋಮಿತಿ ಅಂತರ’ (ಏಜ್ ಗ್ಯಾಪ್) ಕಾರಣ ಎಂಬ ಕುತೂಹಲಕಾರಿ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ವಿಮಾನ ಲ್ಯಾಂಡ್ ಆಗುವಾಗ ಭಾರಿ ಮಳೆಯಾಗುತ್ತಿತ್ತು. ರನ್ವೇಯ ಗುರುತುಗಳು ಕಾಣುತ್ತಿರಲಿಲ್ಲ. ಹೀಗಾಗಿ ನಿಧಾನವಾಗಿ ಚಲಿಸುವಂತೆ ಕಿರಿಯ ಪೈಲಟ್ ಹೇಳಿದರು. ಆದರೆ ಅವರಿಗಿಂತ ಸೇವೆಯಲ್ಲಿ 30 ವರ್ಷ ಅನುಭವ ಹೊಂದಿದ್ದ ಹಿರಿಯ ಪೈಲಟ್ ಆ ಸಲಹೆಯನ್ನು ಉಪೇಕ್ಷಿಸಿದರು.
ಹಿರಿಯ ಪೈಲಟ್ರ ತಪ್ಪು ತೀರ್ಮಾನದಿಂದಾಗಿ ವಿಮಾನ ಹೋಗಿ ಚರಂಡಿಯಲ್ಲಿ ಸಿಲುಕಿಕೊಂಡಿತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನ್ನ ವರದಿಯಲ್ಲಿ ತಿಳಿಸಿದೆ. 2017ರ ಸೆ.2ರಂದು ಅಬುಧಾಬಿಯಿಂದ ಕೊಚ್ಚಿಗೆ ಬರುತ್ತಿದ್ದ ವಿಮಾನ ಚರಂಡಿಗೆ ಜಾರಿತ್ತು. 3 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದವು. ವಿಮಾನಕ್ಕೆ ತೀವ್ರ ಹಾನಿಯಾಗಿತ್ತು.
ಕಳೆದ ಒಂದು ವರ್ಷದ ಹಿಂದೆ ಅಬುದಾಬಿಯಿಂದ 102 ಪ್ರಯಾಣಿಕರನ್ನು ಹೊತ್ತು ಕೊಚ್ಚಿಗೆ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಐಎಕ್ಸ್ 452 ಎಂಬ ವಿಮಾನವು ತೆರೆದ ಚರಂಡಿಗೆ ಬಿದ್ದಿತ್ತು. ಈ ಘಟನೆಗೆ ಅಂದು ಮಂದ ಬೆಳಕಿನ ಕಾರಣ ಎಂದೇ ಹೇಳಲಾಗಿತ್ತು. ಆದರೆ, ಈ ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳ ನಡುವಿನ ಹೆಚ್ಚಿನ ವಯೋಮಿತಿ ಅಂತರ ಹಾಗೂ ಇಬ್ಬರು ನಡುವಿನ ಸಮನ್ವಯದ ಕೊರತೆಯಿಂದ ಈ ಘಟನೆ ಸಂಭವಿಸಿದೆ ಎಂಬ ಕುತೂಹಲಕಾರಿ ಅಂಶ ಇದೀಗ ತನಿಖೆಯಿಂದ ಬಯಲಾಗಿದೆ.
2017ರ ಸೆ. 2ರಂದು ನಡೆದಿದ್ದ ಈ ಘಟನೆಯಲ್ಲಿ ಮೂವರು ಪ್ರಯಾಣಿಕರು ಗಾಯಗೊಂಡಿದ್ದರು. ಅಲ್ಲದೆ, ವಿಮಾನದ ಮುಂಭಾಗಕ್ಕೆ ಸಂಪೂರ್ಣ ಹಾನಿಯಾಗಿತ್ತು. ತಮಗಿಂತಲೂ 30 ವರ್ಷ ಕಿರಿಯಳಾದ ಮಹಿಳಾ ಸಹ ಪೈಲಟ್ ಮಾತನ್ನು ಮುಖ್ಯ ಪೈಲಟ್ ನಿರ್ಲಕ್ಷ್ಯ ಮಾಡಿದ್ದಾರೆ. ಅಲ್ಲದೆ, ಈ ಇಬ್ಬರು ಪೈಲಟ್ಗಳ ನಡುವೆ ಹೊಂದಾಣಿಕೆ ಕೊರತೆ ಕಾರಣಕ್ಕಾಗಿಯೇ ಈ ವಿಮಾನ ದುರಂತ ಸಂಭವಿಸಿದೆ ಎಂಬುದನ್ನು ವಿಮಾನಯಾನ ಅಧಿಕಾರಿಗಳು ಕಂಡುಕೊಂಡಿದ್ದಾರೆ.
ಹೀಗಾಗಿ, ಹೆಚ್ಚು ವಯೋಮಿತಿ ಅಂತರ ಇರುವ ಇಬ್ಬರು ಪೈಲಟ್ಗಳನ್ನು ಒಂದೇ ವಿಮಾನಕ್ಕೆ ನಿಯೋಜನೆ ಮಾಡದಂತೆ ಏರ್ ಇಂಡಿಯಾ ಎಕ್ಸ್ಪ್ರೆಸ್ಗೆ ವಿಮಾನಯಾನ ಸಂಸ್ಥೆ ಸಲಹೆ ನೀಡಿದೆ. ಅಲ್ಲದೆ, ಈ ವಿಮಾನ ದುರುಂತಕ್ಕೆ ಇದೊಂದೇ ಕಾರಣವಲ್ಲ. ಭಾರೀ ಪ್ರಮಾಣದ ಮಳೆ ಹಾಗೂ ಮಂದ ಬೆಳಕಿನ ಕಾರಣವೂ ಇದೆ ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ಹೇಳಿದೆ.