ವಿರೋಧದ ಮಧ್ಯೆ 2 ತೇಜಸ್ ರೈಲು ಐಆರ್ಸಿಟಿಸಿ ತೆಕ್ಕೆಗೆ!
2 ತೇಜಸ್ ರೈಲು ಐಆರ್ಸಿಟಿಸಿ ತೆಕ್ಕೆಗೆ| ಅಹಮದಾಬಾದ್-ಮುಂಬೈ, ದೆಹಲಿ-ಲಖನೌ ಮಾರ್ಗದ ರೈಲುಗಳು| ಈ ರೈಲುಗಳ ಪ್ರಯಾಣಿಕರ ದರ ನಿಗದಿಯೂ ಐಆರ್ಸಿಟಿಯದ್ದೇ!| ರೈಲ್ವೆ ಸಿಬ್ಬಂದಿ ಈ ರೈಲು ಪ್ರಯಾಣಿಕರ ಟಿಕೆಟ್ ಪರಿಶೀಲಿಸುವಂತಿಲ್ಲ| ರೈಲುಗಳ ನಿರ್ವಹಣೆ ಜವಾಬ್ದಾರಿ ಮಾತ್ರ ರೈಲ್ವೆ ಸಿಬ್ಬಂದಿಯದ್ದೇ!
ನವದೆಹಲಿ[ಆ.21]: ಪ್ರತಿಪಕ್ಷಗಳು ಹಾಗೂ ನೌಕರರ ತೀವ್ರ ವಿರೋಧದ ನಡುವೆಯೂ ಕೆಲ ಮಾರ್ಗಗಳ ರೈಲುಗಳನ್ನು ಖಾಸಗಿ ವಲಯಕ್ಕೆ ವಹಿಸಲು ಮುಂದಾಗಿರುವ ರೈಲ್ವೆ ಇಲಾಖೆ, ಇದರ ಮೊದಲ ಭಾಗವಾಗಿ ಅಹಮದಾಬಾದ್-ಮುಂಬೈ ಸೆಂಟ್ರಲ್ ಹಾಗೂ ದೆಹಲಿ-ಲಖನೌ ಮಾರ್ಗದ ಎರಡು ತೇಜಸ್ ಎಕ್ಸ್ಪ್ರೆಸ್ ರೈಲುಗಳನ್ನು ಐರ್ಸಿಟಿಸಿಗೆ ವಹಿಸಲು ನಿರ್ಧರಿಸಿದೆ.
ಈ ಎರಡೂ ರೈಲುಗಳ ಪ್ರಯಾಣ ದರವನ್ನು ಐಆರ್ಸಿಟಿಸಿಯೇ ನಿರ್ಧರಿಸಲಿದೆ. ಆದರೆ, ಗ್ರಾಹಕರಿಗೆ ಯಾವುದೇ ರೀತಿಯ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.
ರೈಲ್ವೆ ಮಂಡಳಿಯ ನೀಲನಕ್ಷೆಯ ಪ್ರಕಾರ, ಮುಂದಿನ 3 ವರ್ಷಗಳ ಕಾಲ ಈ ಎರಡೂ ರೈಲುಗಳನ್ನು ಐಆರ್ಸಿಟಿಸಿ(ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್)ಗೆ ವಹಿಸಿಕೊಡಲು ನಿರ್ಧರಿಸಲಾಗಿದ್ದು, ಈ ಅವಧಿಯಲ್ಲಿ ಈ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ರೀತಿಯ ರಿಯಾಯತಿ, ವಿಶೇಷ ಸವಲತ್ತು ಇರಲ್ಲ. ಡ್ಯೂಟಿ ಪಾಸ್ಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಅಲ್ಲದೆ, ಈ ಅವಧಿಯಲ್ಲಿ ಐಆರ್ಸಿಟಿಯ ರೈಲುಗಳಲ್ಲಿ ರೈಲ್ವೆ ಇಲಾಖೆಯ ಯಾವುದೇ ಸಿಬ್ಬಂದಿ ಟಿಕೆಟ್ ಪರಿಶೀಲನೆ ಮಾಡುವಂತೆಯೂ ಇಲ್ಲ.
ಆದರೆ, ಈ ರೈಲುಗಳ ಚಾಲನೆ ಹಾಗೂ ನಿರ್ವಹಣೆ ಜವಾಬ್ದಾರಿ ಮಾತ್ರವೇ ರೈಲ್ವೆ ಇಲಾಖೆಯ ಸಿಬ್ಬಂದಿಯಾದ ಲೋಕೋ ಪೈಲಟ್ಗಳು, ಗಾರ್ಡ್ಗಳು ಹಾಗೂ ಸ್ಟೇಷನ್ ಮಾಸ್ಟರ್ಗಳ ಹೆಗಲ ಮೇಲಿರಲಿದೆ.