ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಕಾವೇರಿದ ಸಂದರ್ಭದಲ್ಲಿಯೇ ಇತ್ತ ಬಿಜೆಪಿಯಲ್ಲಿ ಮತ್ತೆ ಆಪರೇಷನ್ ಕಮಲದ ಚರ್ಚೆ ಜೋರಾಗಿದೆ ಎನ್ನಲಾಗುತ್ತಿದೆ. 

ಬೆಂಗ​ಳೂರು : ಇಬ್ಬರು ಸಚಿ​ವ​ರಿಗೆ ಕೊಕ್‌ ನೀಡಿ ಸಂಪುಟ ಪುನರ್‌ ರಚ​ನೆಗೆ ಮುಂದಾ​ಗಿ​ರುವ ಕಾಂಗ್ರೆಸ್‌ ಹೈಕ​ಮಾಂಡ್‌ನ ನಿರ್ಧಾ​ರ​ದಿಂದ ಬಿಜೆ​ಪಿ​ಯಲ್ಲಿ ಆಪ​ರೇ​ಷನ್‌ ಕಮಲದ ಆಸೆ ಮತ್ತೆ ಚಿಗು​ರಲು ಅವ​ಕಾಶ ದೊರ​ಕಿ​ದಂತಾ​ಗಿದೆ ಎಂದೇ ವ್ಯಾಖ್ಯಾ​ನಿ​ಸ​ಲಾ​ಗು​ತ್ತಿ​ದೆ.

ಬಿಜೆಪಿ ಜತೆ ಗುರು​ತಿ​ಸಿ​ಕೊಂಡ ಬಹು​ತೇ​ಕ​ರನ್ನು ಈ ಬಾರಿ ಸಂಪು​ಟ​ದಿಂದ ಹೊರ​ಗಿ​ಡ​ಲಾ​ಗಿದೆ. ಹೊಸ​ಕೋಟೆ ಶಾಸಕ ಎಂ.ಟಿ.ಬಿ. ನಾಗ​ರಾಜ್‌ ಅವ​ರನ್ನು ಹೊರ​ತು​ಪ​ಡಿಸಿ ಉಳಿದ ಎಲ್ಲಾ ಅತೃ​ಪ್ತ​ರನ್ನು ಹೊರ​ಗಿ​ಡಲಾ​ಗಿದೆ. ಇದೆ​ಲ್ಲಕ್ಕೂ ಹೆಚ್ಚಾಗಿ ಬಿಜೆಪಿ ಜತೆ​ಗಿನ ಕಾಂಗ್ರೆಸ್‌ ಶಾಸ​ಕರ ಸಖ್ಯದ ನೇತೃ​ತ್ವ ವಹಿ​ಸಿದ್ದ ರಮೇಶ್‌ ಜಾರ​ಕಿ​ಹೊಳಿ ಅವ​ರನ್ನು ಸಂಪು​ಟ​ದಿಂದ ತೆಗೆ​ಯುವ ಮೂಲಕ ಪಕ್ಷದ ವಿರು​ದ್ಧ ಹೋಗು​ವ​ವ​ರಿಗೆ ಶಿಕ್ಷೆ ನೀಡುವ ಸಂದೇಶ ನೀಡಿ​ದೆ.

ಇದು ಸಹ​ಜ​ವಾ​ಗಿಯೇ ಬಿಜೆಪಿ ಜತೆ ಸಖ್ಯ ಹೊಂದಿದ್ದ ಕಾಂಗ್ರೆಸ್‌ ಶಾಸ​ಕ​ರಿಗೆ ಪಕ್ಷ​ದಲ್ಲಿ ಭವಿ​ಷ್ಯ​ವಿಲ್ಲ ಎಂಬ ಭಾವನೆ ಮೂಡಲು ಕಾರ​ಣ​ವಾ​ಗಿದ್ದು, ಇದರ ಲಾಭ​ವನ್ನು ಬಿಜೆಪಿ ಪಡೆ​ಯುವ ಎಲ್ಲಾ ಸಾಧ್ಯ​ತೆ​ಯಿ​ದೆ.

ಲಿಂಗಾ​ಯತ ಸಮು​ದಾ​ಯ​ದಿಂದ ಸಚಿವ ಸ್ಥಾನ​ಕ್ಕಾಗಿ ಬಿ.ಸಿ. ಪಾಟೀಲ್‌ ಹಾಗೂ ಬಿ.ಕೆ. ಸಂಗ​ಮೇಶ್‌ ತೀವ್ರ ಪ್ರಯತ್ನ ನಡೆ​ಸಿ​ದ್ದರು. ಆದರೆ, ಪಕ್ಷನಿಷ್ಠ ಹಾಗೂ ಹೈಕ​ಮಾಂಡ್‌ನೊಂದಿಗಿನ ಸಾಮೀ​ಪ್ಯದ ಕಾರಣ ಎಂ.ಬಿ. ಪಾಟೀಲ್‌ ಅವ​ರಿಗೆ ಅವ​ಕಾಶ ದೊರೆ​ಯುವ ಸಾಧ್ಯತೆ ಇದೆ ಎನ್ನ​ಲಾ​ಗಿದೆ. ಇದ​ರಿಂದ ಅತೃಪ್ತಿ ಹೊಂದಿ​ದರೂ ಸಂಗ​ಮೇಶ್‌ ಅವ​ರಿಗೆ ನಿಗಮ ಮಂಡಳಿ ಸ್ಥಾನ ನೀಡುವ ಮೂಲಕ ಸಮಾ​ಧಾನಪಡಿ​ಸುವ ಪ್ರಯತ್ನ ನಡೆ​ಸ​ಲಾ​ಗಿ​ದೆ. 

ಆದರೆ, ಬಿಜೆ​ಪಿ​ಯಿಂದ ಹಲವು ಬಾರಿ ಆಮಿ​ಷಕ್ಕೆ ಒಳ​ಗಾ​ಗಿಯೂ ಕಾಂಗ್ರೆ​ಸ್‌​ನಲ್ಲೇ ಉಳಿದ ಬಿ.ಸಿ. ಪಾಟೀಲ್‌ ಅವರ ಅತೃಪ್ತಿ ಶಮನ ಮಾಡು​ವುದು ಕಷ್ಟ.

ಅದೇ ರೀತಿ ಬಳ್ಳಾ​ರಿ​ಯಿಂದ ಸ್ಥಳೀಯರ ವಿರೋ​ಧದ ನಡು​ವೆಯೂ ತುಕಾರಾಂ ಅವ​ರಿಗೆ ಅವ​ಕಾಶ ನೀಡ​ಲಾ​ಗಿದೆ. ಇದ​ರಿಂದಾಗಿ ರಮೇಶ್‌ ಜಾರ​ಕಿ​ಹೊಳಿ ತಂಡ​ದಲ್ಲಿ ಗುರು​ತಿ​ಸಿ​ಕೊಂಡಿದ್ದ ನಾಗೇಂದ್ರ ಹಾಗೂ ಆನಂದ್‌ ಸಿಂಗ್‌ ಅವರ ತುಮುಲ ಹೆಚ್ಚಾ​ಗ​ಬ​ಹುದು.

ಇನ್ನು ಲಂಬಾಣಿ ಸಮು​ದಾ​ಯ​ದಿಂದ ಬಳ್ಳಾರಿ ಪರ​ಮೇ​ಶ್ವರ್‌ ನಾಯ್ಕ್ ಅವ​ಕಾಶ ನೀಡಿ ಉಮೇಜ್‌ ಜಿ. ಜಾಧವ್‌ ಅವರನ್ನು ಕೈ ಬಿಟ್ಟಿ​ರು​ವುದು ಅವರು ಬಂಡೇ​ಳಲು ಕಾರ​ಣ​ವಾ​ಗ​ಬ​ಹುದು. ಮಲ್ಲಿ​ಕಾ​ರ್ಜುನ ಖರ್ಗೆ ಅವರು ಪ್ರಯತ್ನ ನಡೆ​ಸಿ​ದರೂ ಜಾಧ​ವ್‌ಗೆ ಸಚಿವ ಸ್ಥಾನ ದೊರೆ​ಯದ ಕಾರಣ ಜಾಧವ್‌ ಈಗ ಖರ್ಗೆ ವಿರು​ದ್ಧವೇ ಬಂಡೇ​ಳುವ ಸಾಧ್ಯ​ತೆ​ಯಿದೆ ಎನ್ನ​ಲಾ​ಗಿ​ದೆ.

ಇನ್ನು ಅತೃ​ಪ್ತ​ರೊಂದಿಗೆ ಗುರು​ತಿ​ಸಿ​ಕೊಂಡಿದ್ದ ಡಾ. ಸುಧಾ​ಕರ್‌, ಪ್ರತಾ​ಪ್‌​ಗೌಡ ಪಾಟೀಲ್‌ ಅವ​ರನ್ನು ಸಚಿವ ಸ್ಥಾನಕ್ಕೆ ಪರಿ​ಗ​ಣಿ​ಸ​ಲಾ​ಗಿ​ಲ್ಲ.

ಅತೃಪ್ತ ಹಿರಿ​ಯ​ರಿಗೂ ಕ್ಯಾರೆ ಎಂದಿ​ಲ್ಲ: ಇದ​ಲ್ಲದೆ, ರಾಜ್ಯ ನಾಯ​ಕತ್ವದ ವಿರುದ್ಧ ಅಸ​ಮಾ​ಧಾನ ಹೊಂದಿದ್ದ ಹಿರಿಯ ಶಾಸ​ಕ​ರಾದ ರಾಮ​ಲಿಂಗಾ​ರೆಡ್ಡಿ, ರೋಷ​ನ್‌​ಬೇಗ್‌, ಎಚ್‌.ಕೆ. ಪಾಟೀಲ್‌, ಎಚ್‌.ಎಂ. ರೇವಣ್ಣ ಅವರ ಬಗ್ಗೆಯೂ ಹೈಕ​ಮಾಂಡ್‌ ಕ್ಯಾರೆ ಎಂದಿಲ್ಲ. ಈ ಎಲ್ಲಾ ಇದು ಕಾಂಗ್ರೆ​ಸ್‌​ನಲ್ಲಿ ಆಂತ​ರಿಕ ತುಮುಲ ಹುಟ್ಟು​ಹಾ​ಕುವ ಸಾಧ್ಯ​ತೆ​ಯಿ​ದ್ದು, ಇದರ ಲಾಭ​ವನ್ನು ಬಿಜೆ​ಪಿ ಪಡೆ​ಯಲು ಯತ್ನಿ​ಸುವ ಎಲ್ಲಾ ಸಾಧ್ಯ​ತೆ​ಗ​ಳಿ​ವೆ.