ಬಿಜೆಪಿ ನೇತೃತ್ವದ NDAಗೆ ಮತ್ತೊಂದು ಶಾಕ್
ಪಂಚರಾಜ್ಯ ಚುನಾವಣೆ ಸೋಲಿನ ಬೆನ್ನಲ್ಲೇ ಬಿಜೆಪಿ ನೇತೃತ್ವದ ಎನ್ ಡಿಎ ಗೆ ಮತ್ತೊಂದು ಶಾಕ್ ನೀಡಿದ ಮಿತ್ರಪಕ್ಷವೊಂದು ಮಹಾ ಘಟಬಂಧನ್ ಸೇರ್ಪಡೆಯಾಗಿದೆ.
ಪಾಟ್ನಾ : ಪಂಚರಾಜ್ಯ ಚುನಾವಣೆಯಲ್ಲಿ ಸೋಲಿನ ಶಾಕ್ ನಿಂದ ಹೊರ ಬರುವ ಮುನ್ನವೇ ಬಿಜೆಪಿ ನೇತೃತ್ವದ NDAಗೆ ಮತ್ತೊಂದು ಆಘಾತ ಎದುರಾಗಿದೆ. NDA ಸಖ್ಯವನ್ನು ತೊರೆದ ಮಿತ್ರಪಕ್ಷವೊಂದ ಪಂಚರಾಜ್ಯಗಳಲ್ಲಿ ಮೂರು ರಾಜ್ಯಗಳನ್ನು ತನ್ನ ಕೈ ವಶ ಮಾಡಿಕೊಂಡ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನವನ್ನು ಸೇರ್ಪಡೆಯಾಗಿದೆ.
ಡಿಸೆಂಬರ್ ಆರಂಭದಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನಿಡಿದ್ದ RSLP ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದಿಂದ ಹಿಂದೆ ಸರಿದು ಮಹಾಘಟಬಂಧನ್ ಸೇರ್ಪಡೆಯಾಗಿದ್ದಾರೆ.
NDA ಯೊಂದಿಗಿನ ಮೈತ್ರಿಯಿಂದ ನಮ್ಮನ್ನು ಕೆಳಕ್ಕೆ ತಳ್ಳಿದ ಮನೋಭಾವ ಕಂಡು ಬಂದ ಹಿನ್ನೆಲೆಯಲ್ಲಿ ದೂರ ಸರಿಯಲಾಗಿದೆ. ಜನರಿಗೆ ನಾವು ಹತ್ತಿರವಾಗಿರಬೇಕು. ನಾವೆಂದಿಗೂ ಜನರೊಂದಿಗೆ ಬೆರೆಯಲು ಬಯಸುತ್ತೇವೆ. ಈ ರೀತಿ ಜನರೊಂದಿಗಿನ ಒಡನಾಟಕ್ಕೆ ಯುಪಿಎ ಸೂಕ್ತ ಎನ್ನುವುದು ನಮ್ಮ ನಂಬಿಕೆಯಾಗಿದ್ದು ಈ ನಿಟ್ಟಿನಲ್ಲಿ ಮಹಾಘಟಬಂಧನದೊಂದಿಗೆ ಕೈ ಜೋಡಿಸಿದ್ದಾಗಿ ಉಪೇಂದ್ರ ಕುಶ್ವಾ ಹೇಳಿದ್ದಾರೆ.
ಇನ್ನು ಕುಶ್ವಾ ಸೇರ್ಪಡೆಯಿಂದ ಯುಪಿಎಗೂ ಮುಂದಿನ ಚುನಾವಣೆಯಲ್ಲಿ NDA ವಿರುದ್ಧ ಹೋರಾಡಲು ಸಾಕಷ್ಟು ಬಲ ತುಂಬಿಕೊಳ್ಳುವ ಭರವಸೆ ಹೆಚ್ಚಿದೆ. ಉಪೇಂದ್ರ ಕುಶ್ವಾ ಮಹಾಘಟಬಂಧನ್ ಸೇರ್ಪಡೆ ಖುಷಿಯ ವಿಚಾರ ಎಂದು ಕಾಂಗ್ರೆಸ್ ಮುಖಂಡ ಅಹಮದ್ ಪಟೇಲ್ ಹೇಳಿದ್ದಾರೆ.
ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕುಶ್ವಾ ಕಳೆದ ವಾರವಷ್ಟೇ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ. ಇನ್ನು ಬಿಹಾರ ಜನತೆ ಬಯಸಿದ ಪ್ರಮಾಣದಲ್ಲಿ ಪ್ರಧಾನಿ ಕೆಲಸ ಮಾಡಿಲ್ಲ ಎಂದು ಕುಶ್ವಾ ಆರೋಪಿಸಿದ್ದಾರೆ.