ವಯಸ್ಸಾದಾಗ ತಮ್ಮನ್ನು ಹಾಗೂ ಹೆಣ್ಮಕ್ಕಳನ್ನು ನೋಡಿಕೊಳ್ಳಲು ರಂಸಿತ್’ನಿಗೆ ಇನ್ನೂ ಪುತ್ರರು ಬೇಕೆನ್ನುವ ಹಂಬಲವಿತ್ತು.

ಅಹಮದಾಬಾದ್ (ಜ.01): ಆಗಲೇ 17 ಮಕ್ಕಳನ್ನು ಹೊಂದಿರುವ ದಂಪತಿ, ಕೊನೆಗೂ ಗ್ರಾಮಸ್ಥರ ಒತ್ತಾಯಕ್ಕೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಿಕೊಂಡಿರುವ ಘಟನೆ ಗುಜರಾತ್ಇನ ದಾಹೋಡ್ ಜಿಲ್ಲೆಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ರಂಸಿತ್ ಹಾಗೂ ಕಾನು ಸಂಗೋಟ್ ದಂಪತಿಗೆ ಈಗಾಗಲೇ 16 ಪುತ್ರಿಯರು ಹಾಗೂ ಒಬ್ಬ ಪುತ್ರನಿದ್ದಾನೆ. ಪುತ್ರ ಸಂತಾನವೇ ಬೇಕೆಂಬ ಹಂಬಲದಿಂದ ಅವರು 18ನೇ ಮಗು ಪಡೆಯಲು ಕೂಡಾ ತಯಾರಾಗಿದ್ದರು. ಆದರೆ ಗ್ರಾಮಸ್ಥರು ಮಧ್ಯ ಪ್ರವೇಶಿಸಿ, ಅವರಿಗೆ ಮನವರಿಕೆ ಮಾಡಿ ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಈಗಿರುವ ಪುತ್ರನಿಗೆ 3 ವರ್ಷ ಪ್ರಾಯವಾಗಿದೆ. ವಯಸ್ಸಾದಾಗ ತಮ್ಮನ್ನು ಹಾಗೂ ಹೆಣ್ಮಕ್ಕಳನ್ನು ನೋಡಿಕೊಳ್ಳಲು ರಂಸಿತ್’ನಿಗೆ ಇನ್ನೂ ಪುತ್ರರು ಬೇಕೆನ್ನುವ ಹಂಬಲವಿತ್ತು. ಒಂದು ಕಡೆ ವೃತ್ತಿಯಲ್ಲಿ ಕಾರ್ಮಿಕರಾಗಿರುವ ದಂಪತಿಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲದಿರುವುದು, ಇನ್ನೊಂದು ಕಡೆ ಹಿಗ್ಗುತ್ತಿರುವ ಕುಟುಂಬದ ಗಾತ್ರ ನೆರೆಕರೆಯವರಿಗೆ ಚಿಂತೆಯನ್ನುಂಟುಮಾಡಿತ್ತು. ಕೊನೆಗೂ ಗ್ರಾಮಸ್ಥರು ಸೇರಿ ರಂಸಿತ್’ನಿಗೆ ತಿಳಿಹೇಳಿದ್ದು, ಕಾನು ಸಂಗೋಟ್’ಗೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಲ್ಲಿ ಒಪ್ಪಿಸಿದ್ದಾರೆ.

16 ಪುತ್ರಿಯರ ಪೈಕಿ ಇಬ್ಬರು ಮೃತಪಟ್ಟಿದ್ದು, ಇಬ್ಬರು ವಿವಾಹವಾಗಿದ್ದಾರೆ. ಇಬ್ಬರು ಹೆಣ್ಮಕ್ಕಳು ರಾಜಕೋಟ್’ನಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.