ಗೂಳಿ ಮೇಲೆ ಆ್ಯಸಿಡ್ ದಾಳಿ?
ತುಮಕೂರಿನ ಅರಳೇಪೇಟೆಯಲ್ಲಿ ಗೂಳಿಯೊಂದರ ಮೇಲೆ ಆ್ಯಸಿಡ್ ದಾಳಿಯಾಗಿದೆ ಎಂಬ ಫೋಟೋ ಸಮೇತ ಇರುವ ಸಾಮಾಜಿಕ ಮಾಧ್ಯಮಗಳ ಪೋಸ್ಟ್ಗಳು ಈಗ ವೈರಲ್ ಆಗಿವೆ.
ತುಮಕೂರು (ಅ. 31): ಅರಳೇಪೇಟೆಯಲ್ಲಿ ಗೂಳಿಯೊಂದರ ಮೇಲೆ ಆ್ಯಸಿಡ್ ದಾಳಿಯಾಗಿದೆ ಎಂಬ ಫೋಟೋ ಸಮೇತ ಇರುವ ಸಾಮಾಜಿಕ ಮಾಧ್ಯಮಗಳ ಪೋಸ್ಟ್ಗಳು ಈಗ ವೈರಲ್ ಆಗಿವೆ. ಒಂದು ನಿರ್ದಿಷ್ಟ ಸಮುದಾಯವು ಈ ದಾಳಿ ನಡೆಸಿದೆ ಎಂಬ ಪ್ರಚೋದನಕಾರಿ ಬರಹಗಳು ಕೂಡ ಇದರ ಜತೆಗೇ ಹರಿದಾಡುತ್ತಿವೆ.
ಈ ಬಗ್ಗೆ ಆಲ್ಟ್ ನ್ಯೂಸ್ ಎಂಬ ‘ನಿಜ ಪತ್ತೆ’ ಕಾರ್ಯಾಚರಣೆ ನಡೆಸುವ ಆನ್ಲೈನ್ ಮಾಧ್ಯಮವು ‘ತನಿಖೆ’ ನಡೆಸಿರುವುದಾಗಿ ಹೇಳಿದೆ. ಗೂಳಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದವರು ಯಾರು? ಈ ಪೋಸ್ಟ್ ಹೇಗೆ ವೈರಲ್ ಆಯಿತು ಎಂಬುದನ್ನು ಪತ್ತೆ ಮಾಡಲು ಯತ್ನಿಸಿದೆ. ಹರೀಶ್ ಕುಮಾರ್ ಎಂಬುವರು ಅಕ್ಟೋಬರ್ 21 ರಂದು ಮೊದಲು ಫೇಸ್ಬುಕ್ನಲ್ಲಿ ಈ ಪೋಸ್ಟ್ ಪ್ರಕಟಿಸಿದ್ದರು.
ಅವರನ್ನು ಸಂಪರ್ಕಿಸಿದಾಗ, ‘ಗೂಳಿಗೆ ಗಾಯವಾಗಿದ್ದನ್ನು ನಾವು ಗಮನಿಸಿ ಪಶುವೈದ್ಯರ ಹತ್ತಿರ ತೆಗೆದುಕೊಂಡು ಹೋದೆವು. ಆಗ ಅವರು ಇದು ಆ್ಯಸಿಡ್ ಎಂದು ಹೇಳಿದರು’ ಎಂದು ತಿಳಿಸಿದರು. ‘ಈಗ ಗೂಳಿ ಚೇತರಿಸಿಕೊಳ್ಳುತ್ತಿದೆ. ಈ ಕೃತ್ಯ ಯಾರು ಎಸಗಿದರು ಎಂದು ನಮಗೆ ಗೊತ್ತಿಲ್ಲ ಎಂದು ಹರೀಶ್ ಹೇಳಿದರು’ ಎಂದು ‘ಆಲ್ಟ್ನ್ಯೂಸ್’ ವರದಿ ಮಾಡಿದೆ.
ಈ ಬಗ್ಗೆ ತುಮಕೂರಿನ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ, ‘ಈ ಬಗ್ಗೆ ದೂರು ದಾಖಲಾಗಿಲ್ಲ’ ಎಂಬ ಉತ್ತರ ಬಂತೆಂದೂ ಅದು ಹೇಳಿದೆ. ಹೀಗಾಗಿ ಒಂದು ನಿರ್ದಿಷ್ಟ ಸಮುದಾಯವು ಈ ಗೂಳಿಯ ಮೇಲೆ ಆ್ಯಸಿಡ್ ದಾಳಿ ಮಾಡಿದೆ ಎಂಬ ಪೋಸ್ಟ್ ಗಳಲ್ಲಿ ಯಾವುದೇ ಹುರುಳಿಲ್ಲ ಎಂದು ‘ಆಲ್ಟ್ ನ್ಯೂಸ್’ ಹೇಳಿಕೊಂಡಿದೆ.
- ವೈರಲ್ ಚೆಕ್