ಪಿವಿಆರ್‌'ನ ಬೆಂಗಳೂರು ವಿಭಾಗದ ಅಧಿಕಾರಿಗಳು ಈ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ದೆಹಲಿಯ ಪ್ರಧಾನ ಕಚೇರಿಯ ಅಧಿ ಕಾರಿಗಳೇ ಇದಕ್ಕೆ ಅಧಿಕೃತ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಕೇಂದ್ರ ಕಚೇರಿಗೆ ಸಂಪರ್ಕಿಸಲು ಪ್ರಯತ್ನಿಸಿದಾಗ ಕೇವಲ ಇ- ಮೇಲ್‌ ಮೂಲಕ ಬಂದ ದೂರುಗಳಿಗೆ ಮಾತ್ರ ಉತ್ತರಿಸಲಾಗುವುದು ಎಂದು ಉಡಾಫೆಯಾಗಿ ಉತ್ತರಿಸಿದರು.
ಬೆಂಗಳೂರು: ‘ರಾಜಕುಮಾರ' ಚಿತ್ರಪ್ರದರ್ಶನದ ವೇಳೆ ಎ.ಸಿ. (ಹವಾನಿಯಂತ್ರಣ) ವ್ಯವಸ್ಥೆ ಕಲ್ಪಿಸಲಿಲ್ಲ ಎನ್ನುವ ವಿಚಾರವಾಗಿ ನಾಗವಾರದ ರಿಗಾಲಿಯಾ ಪಿವಿಆರ್ ಚಿತ್ರಮಂದಿರದಲ್ಲಿ ಗೊಂದಲ ಏರ್ಪ ಟ್ಟಿತ್ತು. ಪ್ರದರ್ಶನ ಶುರುವಾಗಿ 40 ನಿಮಿಷ ಆಗುತ್ತಿದ್ದಂತೆ ಸೆಕೆಯಿಂದ ನೊಂದ ಪ್ರೇಕ್ಷಕರು, ಎ.ಸಿ. ಹಾಕುವಂತೆ ಗಲಾಟೆ ಶುರುಮಾಡಿ, ಪ್ರದರ್ಶನ ನಿಲ್ಲಿಸುವಂತೆ ಒತ್ತಾಯಿಸಿದರು.
ಕನ್ನಡ ಚಿತ್ರಗಳಿಗೆ ಎ.ಸಿ. ವ್ಯವಸ್ಥೆ ಕಲ್ಪಿಸಲಾಗುವುದಿಲ್ಲ ಎಂದು ಸಿಬ್ಬಂದಿವರ್ಗ ಪ್ರತಿಕ್ರಿಯೆ ನೀಡಿದ್ದಾರೆಂದು ಕೆಲವರು ವಿಡಿಯೋ ಚಿತ್ರೀಕರಿಸಿ, ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಕಟಿಸಿ ಆಕ್ರೋಶ ವ್ಯಕ್ತಪ ಡಿಸಿದ್ದರು. ಈ ವಿಚಾರವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಶನಿವಾರ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈ ಬಗ್ಗೆ ಚಿತ್ರಮಂದಿರದ ಮೇಲಧಿಕಾರಿ ಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಜನರೇಟರ್ ಸಮಸ್ಯೆ: ಈ ಬಗ್ಗೆ ‘ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದ ‘ರಾಜಕುಮಾರ' ಚಿತ್ರದ ವಿತರಕ ಜಾಕ್ ಮಂಜು, ‘ಶನಿವಾರ ಮಧ್ಯಾಹ್ನದ ಶೋ ಸಂದರ್ಭದಲ್ಲಿ ಎ.ಸಿ. ಕೆಲಸ ಮಾಡುತ್ತಿರಲಿಲ್ಲ ಎನ್ನುವುದು ನಿಜ. ಅದಕ್ಕೆ ಜನರೇಟರ್ ಸಮಸ್ಯೆ ಉಂಟಾಗಿದ್ದೇ ಕಾರಣ. ಬಂದ ಪ್ರೇಕ್ಷಕರು ಗಲಾಟೆ ಮಾಡಿದರು. ಕೂಡಲೇ ಜನರೇಟರ್ ಸಮಸ್ಯೆಯನ್ನು ಪರಿಹರಿಸಲಾಯಿತು. ಎಂದಿ ನಂತೆ ಮಧ್ಯಾಹ್ನದ ಪ್ರದರ್ಶನ ಮುಂದುವರಿ ಯಿತು. ಕನ್ನಡ ಚಿತ್ರಕ್ಕೆ ಎ.ಸಿ. ವ್ಯವಸ್ಥೆ ಕಲ್ಪಿಸುತ್ತಿಲ್ಲ ಎನ್ನುವುದು ನಿಜ ಅಲ್ಲ' ಎಂದು ಸ್ಪಷ್ಟಪಡಿಸಿದರು.
ಪ್ರತಿಕ್ರಿಯೆಗೆ ನಿರಾಕರಣೆ: ಈ ನಡುವೆ ಪಿವಿಆರ್'ನ ಬೆಂಗಳೂರು ವಿಭಾಗದ ಅಧಿಕಾರಿಗಳು ಈ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ದೆಹಲಿಯ ಪ್ರಧಾನ ಕಚೇರಿಯ ಅಧಿ ಕಾರಿಗಳೇ ಇದಕ್ಕೆ ಅಧಿಕೃತ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಕೇಂದ್ರ ಕಚೇರಿಗೆ ಸಂಪರ್ಕಿಸಲು ಪ್ರಯತ್ನಿಸಿದಾಗ ಕೇವಲ ಇ- ಮೇಲ್ ಮೂಲಕ ಬಂದ ದೂರುಗಳಿಗೆ ಮಾತ್ರ ಉತ್ತರಿಸಲಾಗುವುದು ಎಂದು ಉಡಾಫೆಯಾಗಿ ಉತ್ತರಿಸಿದರು. ಬೆಂಗಳೂರಿನಲ್ಲಿರುವ ಪಿವಿಆರ್'ನಲ್ಲಿ ತಲೆದೋರುವ ಸಮಸ್ಯೆಗೆ ದೆಹಲಿಯಲ್ಲಿ ಕುಳಿತವರು ಉತ್ತರಿಸುವ ವ್ಯವಸ್ಥೆಯನ್ನು ಪಿವಿಆರ್ ಹೊಂದಿದೆ ಎಂಬುದು ಈ ಘಟನೆಯಿಂದ ಗೊತ್ತಾಗಿದೆ.
ಪ್ರೇಕ್ಷಕರಿಗೆ ಟಿಕೆಟ್ ಹಣ ವಾಪಸ್:
ಎ.ಸಿ. ಹಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ‘ರಾಜಕುಮಾರ' ಚಿತ್ರದ ಪ್ರೇಕ್ಷಕರಿಗೆ ಎಲಿಮೆಂಟ್ ಮಾಲ್ನವರು ಟಿಕೆಟ್ನ ಹಣ ಮರಳಿಸಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕನ್ನಡದ ಚಿತ್ರಗಳಿಗೆ ಎ.ಸಿ. ಹಾಕುವುದಿಲ್ಲ ಎಂದು ಮಾಲ್ನವರು ಹೇಳಿದ್ದಾರೆಂದು ಪ್ರೇಕ್ಷಕರು ಆರೋಪಿಸಿ ಹೊರಗೆ ಎದ್ದು ಬಂದಿದ್ದಾರೆ. ಈ ವೇಳೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಮಾಲ್ನವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರೇಕ್ಷಕರನ್ನು ಸಮಾಧಾನಪಡಿಸಿ ಟಿಕೆಟ್ ಹಣ ವಾಪಸ್ ಕೊಡಿಸಿ ಕಳುಹಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎ.ಸಿ. ಹಾಕದ ಬಗ್ಗೆ ಮಾಲ್ನವರನ್ನು ಪ್ರಶ್ನಿಸಿದ್ದು, ತಾಂತ್ರಿಕ ಕಾರಣಗಳಿಂದ ಎ.ಸಿ. ಆನ್ ಆಗಲಿಲ್ಲ ಎಂದು ಹೇಳಿದರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ
epaper.kannadaprabha.in
