ಸತೀಶ್, ವಿಶ್ವನಾಥ್ಗೆ ಸಚಿವ ಸ್ಥಾನ ?
ಸತೀಶ್ ಹಾಗೂ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹ ಕೇಳಿ ಬಂದಿದೆ.
ಬೆಂಗಳೂರು [ಆ.25]: ರೆಡ್ಡಿ ಜನಾಂಗದ ಯುವ ಮುಖಂಡ ಎ.ಸತೀಶ್ ಹಾಗೂ ಎಸ್.ಆರ್. ವಿಶ್ವನಾಥ್ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುವಂತೆ ಕರ್ನಾಟಕ ರೆಡ್ಡಿ ಜನ ಸಂಘ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ವಿಜಯ್ ರಾಘವ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ 90 ಲಕ್ಷಕ್ಕೂ ಅಧಿಕ ಸಮುದಾಯದ ಜನರಿದ್ದಾರೆ.
ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಕೆ.ಸಿ ರೆಡ್ಡಿ ಅವರು ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ರೆಡ್ಡಿ ಸಮುದಾಯದ ಜನರು ವಿಧಾನಸಭೆಗೆ ಚುನಾಯಿತರಾಗಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಜತೆಗೆ ವಿವಿಧ ಕ್ಷೇತ್ರಕ್ಕೆ ಕೊಡುಗೆ ಕೊಟ್ಟಿದ್ದಾರೆ. ಇದನ್ನು ಮನಗಂಡು ಮಂತ್ರಿ ಸ್ಥಾನ ನೀಡಬೇಕು. ಇಬ್ಬರಿಗೂ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಲಾಗದಿದ್ದರೆ ಒಬ್ಬರಿಗೆ ಮಾತ್ರ ನೀಡಿ ಮತ್ತೊಬ್ಬರಿಗೆ ರಾಜ್ಯ ಖಾತೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.
ಸಂಘದ ಉಪಾಧ್ಯಕ್ಷರಾದ ಡಿ.ಎನ್. ಲಕ್ಷ್ಮಣ ರೆಡ್ಡಿ, ಜಿ.ಎನ್. ಮಣಿವೆಂಕಟಪ್ಪ ರೆಡ್ಡಿ, ಜಂಟಿ ಕಾರ್ಯದರ್ಶಿ ಎನ್.ಶೇಖರ್ ರೆಡ್ಡಿ ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.