ನೋಟುಗಳ ಅಮಾನ್ಯದ ನಂತರವಂತೂ ಆಧಾರ್ ನೋಂದಣಿ ಹಾಗೂ ಅದರ ಮೂಲಕ ನಡೆಸುವ ಹಣಕಾಸು ವಹಿವಾಟುಗಳೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದೂ ಮೂಲಗಳು ತಿಳಿಸಿವೆ.

ನವದೆಹಲಿ(ಜ.28):ದೇಶದಲ್ಲಿ 18 ವರ್ಷ ಮೇಲ್ಪಟ್ಟ ಶೇ.99ರಷ್ಟು ಮಂದಿ ಆಧಾರ್ ಹೊಂದಿದ್ದಾರೆ. ಅಂದರೆ 111 ಕೋಟಿಗಿಂತಲೂ ಹೆಚ್ಚು ಮಂದಿ ಭಾರತೀಯರು ವಿಶಿಷ್ಟ ಗುರುತಿನ ಸಂಖ್ಯೆಯನ್ನು ಈಗಾಗಲೇ ತಮ್ಮದಾಗಿಸಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಇದು ಆಧಾರ್ ಪಾವತಿ ವ್ಯವಸ್ಥೆ(ಎಇಪಿಎಸ್)ಯಾದ ಆಧಾರ್ ಪೇಯನ್ನು ಹೆಚ್ಚು ಹೆಚ್ಚಾಗಿ ಬಳಸುವ ಮೂಲಕ ನಗದುರಹಿತ ಆರ್ಥಿಕತೆ ಸೃಷ್ಟಿಸಬೇಕು ಎಂಬ ಕೇಂದ್ರ ಸರ್ಕಾರದ ಆಕಾಂಕ್ಷೆಗೆ ನೀರೆರೆದಿದೆ.

ಈಗ ಬಹುತೇಕ ಮಂದಿ ಆಧಾರ್ ಹೊಂದಿರುವ ಕಾರಣ, ತನ್ನ ಸಾಮಾಜಿಕ ಕ್ಷೇಮಾಭಿವೃದ್ಧಿ ಯೋಜನೆಗಳಲ್ಲಿ ಈ ವಿಶಿಷ್ಟ ಗುರುತಿನ ಸಂಖ್ಯೆಯ ಬಳಕೆಯನ್ನು ಹೆಚ್ಚಿಸುವುದು ಹಾಗೂ ಅದರ ಮೂಲಕವೇ ಸಬ್ಸಿಡಿ ವಿತರಣೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.

ಆಧಾರ್ ಬಳಕೆಯನ್ನು ಪಡಿತರ, ಎಲ್‌ಪಿಜಿ ಮತ್ತು ಉದ್ಯೋಗ ಖಾತ್ರಿ ಯೋಜನೆಗೆ ಸೀಮಿತಗೊಳಿಸಿದ್ದರೂ, 2 ವರ್ಷಗಳಲ್ಲಿ ಸರ್ಕಾರವು ಬರೋಬ್ಬರಿ ₹36 ಸಾವಿರ ಕೋಟಿಯನ್ನು ಉಳಿತಾಯ ಮಾಡಿದೆ. ನೋಟುಗಳ ಅಮಾನ್ಯದ ನಂತರವಂತೂ ಆಧಾರ್ ನೋಂದಣಿ ಹಾಗೂ ಅದರ ಮೂಲಕ ನಡೆಸುವ ಹಣಕಾಸು ವಹಿವಾಟುಗಳೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದೂ ಮೂಲಗಳು ತಿಳಿಸಿವೆ.