ಕತ್ತೆಗಳನ್ನು ಜೈಲಿಗೆ ಕಳಿಸಿದ ಪೊಲೀಸರು: ಅಷ್ಟಕ್ಕೂ ಅವು ಮಾಡಬಾರದ ತಪ್ಪೇನು ಗೊತ್ತೆ ?
ಉತ್ತರ ಪ್ರದೇಶದ ಜಲೂನ್ ಜಿಲ್ಲೆಯಲ್ಲಿ 8 ಕತ್ತೆಗಳನ್ನು ಜೈಲಿಗೆ ತಳ್ಳಲಾಗಿದೆ.
ಲಖನೌ(ನ.28): ಮನುಷ್ಯರನ್ನು ತಪ್ಪು ಮಾಡಿದರೆ ಜೈಲಿಗೆ ಹಾಕುವುದು ಮನುಷ್ಯರೆ ಮಾಡಿಕೊಂಡಿರುವ ಕಾನೂನು. ಮನುಷ್ಯ ಕೂಡ ಪ್ರಾಣಿಯಾದರೂ ಈತನಿಗೆ ಆಲೋಚನ ಶಕ್ತಿಯಿದೆ. ಸರಿತಪ್ಪುಗಳ ಅರಿವಿದೆ. ಈ ಕಾರಣದಿಂದ ದಂಡಿಸಲಾಗುತ್ತದೆ.
ಆದರೆ ಉತ್ತರ ಪ್ರದೇಶದ ಜಲೂನ್ ಜಿಲ್ಲೆಯಲ್ಲಿ 8 ಕತ್ತೆಗಳನ್ನು ಜೈಲಿಗೆ ತಳ್ಳಲಾಗಿದೆ. 2 ಲಕ್ಷಕ್ಕೂ ಹೆಚ್ಚು ತೋಟದ ಸಸ್ಯಗಳನ್ನು ಹಾಳು ಮಾಡಿದ ಕಾರಣಕ್ಕಾಗಿ ಹಾಗೂ ಜೈಲು ಸಿಬ್ಬಂದಿಯ ಮಕ್ಕಳಿಗೆ ಗಾಯಗೊಳಿಸಿದ್ದಕ್ಕಾಗಿ ಜೈಲಿಗೆ ತಳ್ಳಲಾಗಿದೆ.
ಈ ಕತ್ತೆಗಳನ್ನು ಹಲವು ಬಾರಿ ತೋಟಕ್ಕೆ ಬಾರದಂತೆ ತಡೆಯೊಡ್ಡಿದರೂ ಅವು ಪದೇಪದೇ ಬಂದು ಹಾಳು ಮಾಡುತ್ತಿದ್ದವು. ಮಾಲೀಕರಿಗೂ ಈ ಬಗ್ಗೆ ಎಚ್ಚರಿಕೆ ನೀಡಿದರೂ ಅವರು ಗಮನಹರಿಸಿರಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋದ ಕಾರಣ ಸೆರೆಮನೆಗೆ ಹಾಕಬೇಕಾಯಿತು ಎಂದು ಜೈಲು ಅಧೀಕ್ಷಕ ತಿಳಿಸಿದ್ದಾರೆ.
ಅನಂತರ ಕತ್ತೆಗಳ ಮಾಲೀಕರು ಸ್ಥಳೀಯ ಬಿಜೆಪಿ ನಾಯಕರೊಂದಿಗೆ ತೆರಳಿ ಇನ್ನು ಮುಂದೆ ಈ ರೀತಿಯಾಗದಂತೆ ಭರವಸೆ ನೀಡಿದ ನಂತರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.