ಕಾಂಗ್ರೆಸ್ ಮುಖಂಡರೋರ್ವರು ಹೊಸ ಬಾಂಬ್ ಸಿಡಿಸಿದ್ದಾರೆ. ಒಂದು ವೇಳೆ ಬಿಜೆಪಿಯವರು ಕಾಂಗ್ರೆಸ್‌-ಜೆಡಿಎಸ್‌ ಶಾಸಕರನ್ನು ಸೆಳೆದರೆ, ಕಾಂಗ್ರೆಸ್‌ ಸಹ ಬಿಜೆಪಿ ಶಾಸಕರನ್ನು ತನ್ನತ್ತ ಸೆಳೆದುಕೊಳ್ಳಲಿದೆ ಎಂದಿದ್ದಾರೆ. 

 ರಾಯಚೂರು : ಬಿಜೆಪಿಯ 6 ಶಾಸಕರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದಾರೆ. ಒಂದು ವೇಳೆ ಬಿಜೆಪಿಯವರು ಕಾಂಗ್ರೆಸ್‌-ಜೆಡಿಎಸ್‌ ಶಾಸಕರನ್ನು ಸೆಳೆದರೆ, ಕಾಂಗ್ರೆಸ್‌ ಸಹ ಬಿಜೆಪಿ ಶಾಸಕರನ್ನು ತನ್ನತ್ತ ಸೆಳೆದುಕೊಳ್ಳಲಿದೆ ಎಂದು ಎಐಸಿಸಿ ಕಾರ್ಯದರ್ಶಿ, ತೆಲಂಗಾಣ ರಾಜ್ಯದ ಉಸ್ತುವಾರಿ ಹಾಗೂ ಎಂಎಲ್ಸಿ ಎನ್‌.ಎಸ್‌.ಬೋಸರಾಜು ಹೊಸ ಬಾಂಬ್‌ ಸಿಡಿಸಿದ್ದಾರೆ. ಡಿಎಆರ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಭದ್ರವಾಗಿದೆ. 

Add Asianetnews Kannada as a Preferred SourcegooglePreferred

ಅದನ್ನು ಅತಂತ್ರಗೊಳಿಸಲು ಬಿಜೆಪಿಯವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾವ ಶಾಸಕರೂ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿಲ್ಲ. ಕಾಂಗ್ರೆಸ್‌ನ ಯಾವೊಬ್ಬ ಶಾಸಕನು ಪಕ್ಷ ಬಿಡುವುದಿಲ್ಲ ಎನ್ನುವುದರ ಕುರಿತು ಪಕ್ಷದ ಮುಖಂಡರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ರಾಜಕೀಯ ಎನ್ನುವುದು ಸೈಕಲ್‌ನಂತೆ ಆ ಪಕ್ಷದವರು ನಮ್ಮ ಶಾಸಕರನ್ನು ಸೆಳೆದಲ್ಲಿ ನಾವು ಅವರ ಶಾಸಕರನ್ನು ಸೆಳೆಯುತ್ತೇವೆ ಎಂದು ಹೇಳಿದರು.

ಆಪರೇಷನ್‌ ಕಮಲದಿಂದ ಆಡಳಿತ ನಡೆಸಿದ ಬಿಜೆಪಿ, ಐದು ವರ್ಷಗಳಲ್ಲಿ ಇಡೀ ರಾಜ್ಯವನ್ನು ಹಾಳು ಮಾಡಿದೆ. ಅವರಿಗೆ ಇನ್ನೂ ಬುದ್ಧಿ ಬಂದಿಲ್ಲ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಇದೇ ಕೆಲಸದಲ್ಲಿ ಮಗ್ನರಾಗಿದ್ದಾರೆ. ಸರ್ಕಾರವನ್ನು ಅಂತ್ರಗೊಳಿಸುವ ಕಾರ್ಯ ಕೇವಲ ಕರ್ನಾಟಕದಲ್ಲಿ ನಡೆಸುತ್ತಿಲ್ಲ. ಇಡೀ ದೇಶದಲ್ಲಿಯೇ ಈ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇಂತಹ ಕಾರ್ಯವನ್ನು ಕಾಂಗ್ರೆಸ್‌ ಮಾಡುವುದಿಲ್ಲ ಎಂದು ಬೋಸರಾಜು ತಿಳಿಸಿದರು.