ದಸರಾಕ್ಕೆ ಇನ್ನೈದೇ ದಿನ ಬಾಕಿ; ಇನ್ನೂ ರೆಡಿಯಾಗಿಲ್ಲ ಆಹ್ವಾನ ಪತ್ರಿಕೆ…!
ಮೈಸೂರು (ಸೆ.26): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಆರಂಭಕ್ಕೆ ಇನ್ನೂ ಐದು ದಿನಗಳು ಮಾತ್ರ ಬಾಕಿಯಿದೆ. ಅಕ್ಟೋಬರ್ 1ರಂದು ಚಾಮುಂಡಿಬೆಟ್ಟದಲ್ಲಿ ಹಿರಿಯ ಕವಿ ಚನ್ನವೀರ ಕಣವಿ ಅವರಿಂದ ನಾಡಹಬ್ಬಕ್ಕೆ ಚಾಲನೆ ಸಿಗಲಿದೆ.
ನಾಡಹಬ್ಬದ ದಸರಾ ಮಹೋತ್ಸವದ ಕೊನೆಯ ದಿನ ಜಂಬೂಸವಾರಿ ಮೆರವಣಿಗೆಯ ಸಮಯವೇ ಇನ್ನೂ ನಿಗದಿಯಾಗಿಲ್ಲ. ಇದೇ ಕಾರಣಕ್ಕೆ ದಸರೆಯ ಆಹ್ವಾನ ಪತ್ರಿಕೆಗಳೂ ಸಿದ್ಧಗೊಂಡಿಲ್ಲ.
ವಿದೇಶಿ ಪ್ರವಾಸಿಗರನ್ನು ದಸರೆಗೆ ಆಕರ್ಷಿಸಲು ಪ್ರತೀ ವರ್ಷ ದಸರಾ ಸಮಿತಿ ಹೊರತರುತ್ತಿದ್ದ ದಸರಾ ಗೋಲ್ಡ್ಕಾರ್ಡ್ ಕೂಡ ಇನ್ನು ಬಿಡುಗಡೆಯಾಗಿಲ್ಲ. ದಸರಾ ಗೋಲ್ಡ್ ಕಾರ್ಡ್ನಿಂದ ದಸರಾ ಸಮಿತಿಗೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿತ್ತು.
ಅಷ್ಟಕ್ಕೂ ಸಚಿವ ಮಹದೇವಪ್ಪ ಮೈಸೂರಿನಲ್ಲಿ ದಸರಾ ಸಭೆ ನಡೆಸಿ ಒಂದು ತಿಂಗಳೇ ಆಗಿದೆ. ಮೈಸೂರಿನತ್ತ ಮುಖ ಹಾಕಿ 20 ದಿನಗಳಾಗಿವೆ. ಸಾಂಪ್ರದಾಯಿಕವಾಗಿಯಾದರೂ ಅಚ್ಚುಕಟ್ಟಾಗಿ ದಸರಾ ಮಾಡ್ತೇವೆ ಅಂತಾ ಹೇಳುತ್ತಿದ್ದ ಸಚಿವರು ಮೈಸೂರಿನತ್ತ ಬರಲು ಏಕೆ ಹಿಂಜರಿಯುತ್ತಿದ್ದಾರೆ ಅನ್ನೋದೇ ಈಗ ಯಕ್ಷಪ್ರಶ್ನೆ.