ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ: 46 ಮಂದಿ ಸಾವು, ಗಾಯಾಳು ಸ್ಥಿತಿ ಗಂಭೀರ ಗಾಯ
ಹಿಮಾಚಲ ಪ್ರದೇಶದ ಮಂಡಿ-ಪಠಾನಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಘ ಸ್ಪೋಟದಿಂದ ಸಂಭವಿಸಿದ ಭಾರೀ ಭೂಕುಸಿತದಿಂದ ಎರಡು ಬಸ್ಸು ಸೇರಿದಂತೆ ಹಲವು ವಾಹನಗಳು ಉರುಳಿ ಬಿದ್ದಿವೆ. ಈ ದುರ್ಘಟನೆಯಲ್ಲಿ ಇದುವರೆಗೆ 46 ಮಂದಿ ಸಾವನ್ನಪ್ಪಿದ್ದಾರೆ.
ನವದೆಹಲಿ(ಆ.14): ಹಿಮಾಚಲ ಪ್ರದೇಶದ ಮಂಡಿ-ಪಠಾನಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಘ ಸ್ಪೋಟದಿಂದ ಸಂಭವಿಸಿದ ಭಾರೀ ಭೂಕುಸಿತದಿಂದ ಎರಡು ಬಸ್ಸು ಸೇರಿದಂತೆ ಹಲವು ವಾಹನಗಳು ಉರುಳಿ ಬಿದ್ದಿವೆ. ಈ ದುರ್ಘಟನೆಯಲ್ಲಿ ಇದುವರೆಗೆ 46 ಮಂದಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಹಲವು ಮಂದಿ ಗಾಯಗೊಂಡವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎನ್ನಲಾಗಿದೆ. ಒಂದು ಬಸ್ಸು ಮನಾಲಿಯಿಂದ ಕತ್ರಾ ಮತ್ತೊಂದು ಮನಾಲಿಯಿಂದ ಚಂಬಾ ಕಡೆ ತೆರಳುತ್ತಿತ್ತು. ಕೊಟರೂಪಿಯಲ್ಲಿ ನಿಂತಿದ್ದಾಗ ಈ ಘಟನೆ ನಡೆದಿದೆ.
ಹಲವು ಪ್ರಯಾಣಿಕರು ಮಣ್ಣಿನಡಿ ಸಿಲುಕಿದ್ದಾರೆ. ಹಲವು ವಾಹನಗಳೂ ಕೂಡ ಮಣ್ಣಿನಡಿ ಸಿಲುಕಿವೆ. ಭಾರತೀಯ ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ.
ಕಳೆದ ಮೂರು ದಶಕದಲ್ಲಿ ಹಿಮಾಚಲಪ್ರದೇಶದಲ್ಲಿ ಸಂಭವಿಸಿದ ಮೂರನೇ ಭೀಕರ ಭೂಕುಸಿತ ಇದಾಗಿದೆ. 1988ರಲ್ಲಿ ಶಿಮ್ಲಾ ಜಿಲ್ಲೆಯ ಮಟಿಯಾನಾದಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಬಸ್ಸು ಸಿಲುಕಿ 45 ಮಂದಿ ಸಾವನ್ನಪ್ಪಿದ್ದರು. 1994ರಲ್ಲಿ ಕುಲು ಜಿಲ್ಲೆಯ ಲುಗ್ಗರ್ ಹಟಿಯಲ್ಲಿ ಇದೇ ರೀತಿ ಅವಘಡ ಸಂಭವಿಸಿ 42 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.