ಧಿಮಾಕಿನ ಮೂವರು ಉಗ್ರರನ್ನು ಸದೆಬಡಿದ ಸೇನೆ: ಓರ್ವ ಯೋಧ ಹುತಾತ್ಮ!
ಕಣಿವೆಯಲ್ಲಿ ಉಗ್ರರ ಅಟ್ಟಹಾಸಕ್ಕೆ ಅಂತ್ಯ ಹಾಡಿದ ಸೇನೆ| ದಾಳಿ ನಡೆಸಿದ್ದ ಮೂವರೂ ಉಗ್ರರನ್ನು ಕೊಂದು ಹಾಕಿದ ಯೋಧರು| ಮನೆಯೊಳಗೆ ನುಗ್ಗಿ ಮನೆಯವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಹೇಡಿಗಳು| ಗುಂಡಿನ ಕಾಳಗದಲ್ಲಿ ಮೂವರೂ ಉಗ್ರರು ಮಟಾಷ್| ಉಗ್ರರ ದಾಳಿಯಲ್ಲಿ ಹುತಾತ್ಮನಾದ ಭಾರತೀಯ ಸೇನೆಯ ಯೋಧ| ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ|
ಶ್ರೀನಗರ(ಸೆ.28): ಕಣಿವೆಯಲ್ಲಿ ಮತ್ತೆ ಉಗ್ರರು ಹೈಪರ್ ಆ್ಯಕ್ಟೀವ್ ಮೋಡ್’ಗೆ ಹೋಗಿದ್ದು, ನಾಗರಿಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಮತ್ತೆ ದಾಳಿ ಮುಂದುವರೆಸಿದ್ದಾರೆ.
ಇಲ್ಲಿನ ಗಂದೇರ್ ಬಾಲ್ ಜಿಲ್ಲೆಯ ನರನಾಗ್ ಬಳಿ ಮನೆಯೊಳಗೆ ನುಗ್ಗಿದ್ದ ಉಗ್ರರು, ಮನೆಯವರನ್ನು ಒತ್ತೆಯಾಳಾಗಿರಿಸಿಕೊಂಡು, ಭದ್ರತಾ ಪಡೆಗಳೊಂದಿಗೆ ಕಾಳಗಕ್ಕೆ ಇಳಿದಿದ್ದರು.
ನಿರಂತರವಾಗಿ ನಡೆದ ಕಾರ್ಯಾಚರಣೆಯಲ್ಲಿ ಸೇನೆ ಮೂವರೂ ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಸಫಲವಾಗಿದೆ. ಆದರೆ ೀ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಬೆಳಗ್ಗೆ ಭಾರತೀಯ ಸೇನಾ ವಾಹನದ ಮೇಲೆ ಉಗ್ರರು ಗ್ರೈನೇಡ್ ದಾಳಿ ನಡೆಸಿದ್ದರು. ಪ್ರತ್ಯುತ್ತರವಾಗಿ ಯೋಧರು ದಾಳಿ ನಡೆಸಿದಾಗ ಮೂವರು ಉಗ್ರರು ಮನೆಯೊಂದಕ್ಕೆ ನುಗ್ಗಿ ಮನೆಯವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು.
ಕೂಡಲೇ ಮನೆಯನ್ನು ಸುತ್ತುವರಿದ ಭಾರತೀಯ ಯೋಧರು ಮೂವರು ಉಗ್ರರನ್ನು ಹತ್ಯೆ ಮಾಡಿದ್ದು, ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದ ವೃದ್ಧನನ್ನು ರಕ್ಷಿಸಿದ್ದಾರೆ. ಇದೇ ವೇಳೆ ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.