ರೈಲ್ವೆ ಹಳಿ ಮೇಲೆ ರಾವಣನ ಸುಡಲು ಹೋಗಿ ದುರಂತ ನಡೆದಿದ್ದು ಮಾಸುವ ಮುನ್ನವೇ ಮತ್ತೊಂದು ಅನಾಹುತ ನಡೆದು ಹೋಗಿದೆ. ರೈಲ್ವೆ ಹಳಿ ಮೇಲೆ ಎಣ್ಣೆ ಪಾರ್ಟಿ ಮಾಡಲು ಹೋದ ಮೂವರು ಕುಡುಕರು ಪ್ರಾಣ ಕಳೆದುಕೊಂಡಿದ್ದಾರೆ.

ನವದೆಹಲಿ[ಅ.29]  ಹಳಿ ಮೇಲೆ ಕುಳಿತಿದ್ದ ಮೂವರ ಮೇಲೆ ರೈಲು ಹರಿದು ಹೋಗಿದೆ. ಸೋಮವಾರ ಬೆಳಿಗ್ಗೆ ನಂಗ್ಲೋಯಿ ರೈಲ್ವೇ ನಿಲ್ದಾಣದ ಬಳಿ ದುರ್ಘಟನೆ ನಡೆದಿದ್ದು ಮೂವರ ಪ್ರಾಣ ಬಲಿಯಾಗಿದೆ.

Add Asianetnews Kannada as a Preferred SourcegooglePreferred

ಮೂವರೂ ಬೆಳಗ್ಗೆ ಸುಮಾರು 7.15 ಕ್ಕೆ ರೈಲ್ವೇ ಹಳಿ ಮೇಲೆ ಕುಳಿತು ಮದ್ಯ ಸೇವನೆ ಮಾಡುತ್ತಿದ್ದರು. ಈ ವೇಳೆ ಬಿಕಾನೆರ್-ದೆಹಲಿ ಎಕ್ಸ್ ಪ್ರೆಸ್ ರೈಲು ಬಂದಿದೆ. ಈ ಸಂದರ್ಭದಲ್ಲಿ ರೈಲು ಚಾಲಕ ಹಾರ್ನ್ ಮಾಡಿದರೂ ಪ್ರಯೋಜನ ಆಗಿಲ್ಲ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ರೈಲ್ವೇ ಡಿಸಿಪಿ ದಿನೇಶ್ ಗುಪ್ತ ಮಾಹಿತಿ ನೀಡಿದ್ದಾರೆ.

ರೈಲ್ವೆ ರಕ್ಷಣಾ ಸಿವಿಲ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯಕ್ಕೆ ಮೃತರ ಬಗ್ಗೆ ಯಾವುದೇ ಗುರುತು ಪತ್ತೆಯಾಗಿಲ್ಲ. ಒಂದು ಕ್ಷಣದ ಮೋಜಿಗಾಗಿ ಮೂವರು ವ್ಯಕ್ತಿಗಳು ಅಮೂಲ್ಯವಾದ ಜೀವ ಕಳೆದುಕೊಂಡಿದ್ದು ತಮ್ಮ ಕುಟುಂಬವನ್ನು ನೋವಿಗೆ ತಲ್ಳಿದ್ದಾರೆ.